"ಕ್ಯಾಮರಾ ಎದುರು ಮುಖಾಮುಖಿಯಾಗೋಣ ಬನ್ನಿ": ಪ್ರಧಾನಿ ಮೋದಿಗೆ ರವೀಶ್ ಕುಮಾರ್ ಸವಾಲು
ಹೊಸದಿಲ್ಲಿ, ಜೂ.5: ಎನ್ ಡಿಟಿವಿ ಸ್ಥಾಪಕರ ಮೇಲೆ ಸಿಬಿಐ ದಾಳಿ ನಡೆದ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ ಟಿವಿ ವಾಹಿನಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖಾಮುಖಿಯಾಗುವ ಸವಾಲು ಹಾಕಿದ್ದಾರೆ. ಎನ್ ಡಿಟಿವಿಯನ್ನು ಮುಗಿಸುವ ಮನಸ್ಸಿದ್ದರೆ ಲೈವ್ ಟಿವಿ ಕಾರ್ಯಕ್ರಮದಲ್ಲಿ ತಮ್ಮನ್ನು ಎದುರಿಸುವಂತೆ ಅವರು ನೇರವಾಗಿ ಪ್ರಧಾನಿಯನ್ನು ಆಹ್ವಾನಿಸಿದ್ದಾರೆ.
"ಹಾಗಾದರೆ, ನೀವು ನಮ್ಮನ್ನು ಹೆದರಿಸುತ್ತೀರಿ, ಬೆದರಿಸುತ್ತೀರಿ. ಆದಾಯ ಇಲಾಖೆ ಸಹಿತ ಎಲ್ಲರನ್ನೂ ನಮ್ಮ ಹಿಂದೆ ಬಿಟ್ಟಿದ್ದೀರಿ. ಆಯಿತು ನೋಡಿ, ನಾವು ಭಯದಿಂದ ನಡುಗುತ್ತಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಭಟ್ಟಂಗಿಗಳನ್ನು ಬಿಟ್ಟು ನಮ್ಮ ಚಾರಿತ್ರ್ಯ ಹನನ ಮಾಡಿಸಿ. ಆದರೆ ಬಹುತೇಕ ಎಲ್ಲ ಮಾಧ್ಯಮಗಳು ನಿಮ್ಮ ಮಡಿಲಲ್ಲಿ ಕೂತು ಆಡವಾಡುತ್ತಿದ್ದರೆ ಒಂದು ಮಾಧ್ಯಮ ಹಾಗೆ ಮಾಡಲು ನಿರಾಕರಿಸಿದೆ. ದೇಶಾದ್ಯಂತ ಮಾಧ್ಯಮಗಳು ನಿಮ್ಮ ಭಟ್ಟಂಗಿಗಳಾಗುವುದೇ ನಿಮ್ಮ ಸಾಧನೆಯಾಯಿತು. ಎನ್ ಡಿಟಿವಿ ಸುಮ್ಮನೆ ಅಸ್ತಿತ್ವಕ್ಕೆ ಬಂದಿಲ್ಲ. ಇದು ನಿಮಗೂ ಗೊತ್ತಿದೆ. ಹಾಗಾಗಿ ಅದರ ಅಂತ್ಯ ನೋಡುವ ಅಷ್ಟು ದೊಡ್ಡ ಬಯಕೆ ನಿಮಗಿದ್ದರೆ ನಾವಿಬ್ಬರೂ ಮುಖಾಮುಖಿಯಾಗೋಣ. ನಾವು ಮತ್ತು ನೀವು ಇರುತ್ತೀರಿ, ಜೊತೆಗೆ ನೇರ ಪ್ರಸಾರದ ಕ್ಯಾಮರಾಗಳು " ಎಂದು ರವೀಶ್ ಕುಮಾರ್ ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ರವೀಶ್ ಅವರ ಹೇಳಿಕೆ ಈಗ ವೈರಲ್ ಆಗಿದ್ದು ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.