ಬೀಫ್ ಸಾಗಾಟದ ಶಂಕೆ: ಗುಂಪಿನಿಂದ ವ್ಯಕ್ತಿಗೆ ಹಲ್ಲೆ ಮೊಬೈಲ್, ನಗದು ಕಸಿದ ದುಷ್ಕರ್ಮಿಗಳು
ಧನಬಾದ್,ಜೂ.8: ಇಫ್ತಾರ್ ಕೂಟಕ್ಕಾಗಿ ಬೀಫ್ ಕೊಂಡೊಯ್ಯುತ್ತಿದ್ದಾರೆಂಬ ಶಂಕೆಯಲ್ಲಿ ಗ್ರಾಮಸ್ಥರ ಗುಂಪೊಂದು ವ್ಯಕ್ಚಿಯೊಬ್ಬರಿಗೆ ಹಿಗ್ಗಾಮಗ್ಗಾ ಥಳಿಸಿದ ಘಟನೆ ಜಾರ್ಖಂಡ್ನ ಧನಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮಂಗಳವಾರ ಈ ಘಟನೆ ನಡೆದಿದ್ದು, ಮುರಾಹ್ದಿ ಗ್ರಾಮದ ನಿವಾಸಿಯಾದ ಐನುಲ್ ಅನ್ಸಾರಿ ಸ್ಕೂಟರ್ನಲ್ಲಿ ತನ್ನ ಮನೆಗೆ ತೆರಳುತ್ತಿದ್ದಾಗ ಲೋಹಾರ್ಬಾ ಗ್ರಾಮದ ಸಮೀಪದ ಗುಂಪೊಂದು ಅವರನ್ನು ತಡೆದು ನಿಲ್ಲಿಸಿತ್ತು ಹಾಗೂ ಆತ ಬೀಫ್ ಸಾಗಿಸುತ್ತಿದ್ದಾರೆಂದು ಆರೋಪಿಸಿ, ಅವರ ಮೇಲೆ ಹಲ್ಲೆ ನಡೆಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಅನ್ಸಾರಿಯವರನ್ನು ರಕ್ಷಿಸಿದ್ದಾರೆಂದು ಪೊಲೀಸ್ ತನಿಖಾಧಿಕಾರಿ ದಿನೇಶ್ ಸಿಂಗ್ ತಿಳಿಸಿದ್ದಾರೆ. ಗ್ರಾಮಸ್ಥರು ಸ್ಕೂಟರ್ನ್ನು ತಪಾಸಣೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದಾಗ ಅದರಲ್ಲಿ ಮಾಂಸ ಪತ್ತೆಯಾಗಿದೆಯನ್ನಲಾಗಿದೆ.
ಹಲ್ಲೆಗೊಳಗಾದ ಅನ್ಸಾರಿಯನ್ನು ಧನಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ತುರ್ತುಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನ್ಸಾರಿ ಆಕ್ರಮವಾಗಿ ಬೀಫ್ ಮಾರಾಟದಲ್ಲಿ ತೊಡಗಿದ್ದಾನೆಂಬ ಗ್ರಾಮಸ್ಥರ ಆರೋಪವನ್ನು ಆನ ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ. ತನ್ನ ಮನೆಯಲ್ಲಿ ನಡೆಯಲಿದ್ದ ಇಫ್ತಾರ್ ಕೂಟಕ್ಕಾಗಿ ಆತ ಆಡಿನ ಮಾಂಸವನ್ನು ತರುತ್ತಿದ್ದನೆಂದು ಅವರು ಹೇಳಿದ್ದಾರೆ. ಅನ್ಸಾರಿಯ ಸ್ಕೂಟರ್ನಲ್ಲಿ ಪತ್ತೆಯಾದ ಮಾಂಸವನ್ನು ಗುರುತಿಸಲು ಅದನ್ನು ರಾಂಚಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.