ಆ್ಯಂಬುಲೆನ್ಸ್ ಸೇವೆ ಅಲಭ್ಯ: 7 ತಿಂಗಳ ಮಗುವಿನ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದರು!
ಉತ್ತರಪ್ರದೇಶ, ಜೂ.14: ಆ್ಯಂಬುಲೆನ್ಸ್ ಸೇವೆ ಲಭಿಸದ ಹಿನ್ನೆಲೆಯಲ್ಲಿ 7 ತಿಂಗಳ ಮಗುವಿನ ಮೇತದೇಹವನ್ನು ಸೈಕಲ್ ನಲ್ಲಿ ಸಾಗಿಸಿದ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಎಂಬಲ್ಲಿ ನಡೆದಿದೆ.
ವಾಂತಿಭೇದಿಯಿಂದ ಬಳಲುತ್ತಿದ್ದ ಮಗುವ ಪೂನಮ್ ಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲು ತಂದೆ ಅನಂತ್ ಕುಮಾರ್ ಅಲಹಬಾದ್ ಗೆ ತೆರಳಿದ್ದು, ಸಂಬಂಧಿ ಬ್ರಿಜ್ ಮೋಹನ್ ಆಸ್ಪತ್ರೆಯಲ್ಲಿದ್ದರು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಮಗು ಸಾವನ್ನಪ್ಪಿದ್ದು, ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ಲಭಿಸಿರಲಿಲ್ಲ.
ಆ್ಯಂಬುಲೆನ್ಸ್ ಒದಗಿಸುವಂತೆ ನಾನು ಹಲವು ಬಾರಿ ಚಾಲಕನಿಗೆ ಕರೆ ಮಾಡಿದೆ. ಆದರೆ ಆತನ ಬರಲು ನಿರಾಕರಿಸಿದ್ದ. ಇದರಿಂದಾಗಿ ಸೈಕಲ್ ನಲ್ಲೇ ಮಗುವಿನ ಮೃತದೇಹ ಸಾಗಿಸಬೇಕಾಯಿತು ಎನ್ನುತ್ತಾರೆ ಬ್ರಿಜ್ ಮೋಹನ್.
ಘಟನೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಲಭಿಸದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಬೈಕ್ ನಲ್ಲಿ ಸಾಗಿಸಿದ್ದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು.