ಕುಮಾರ್ ವಿಶ್ವಾಸ್ ಧಿಕ್ಕರಿಸಿ, ಇಫ್ತಾರ್ಗೆ ತೆರಳಿದ ಕೇಜ್ರಿ
ಹೊಸದಿಲ್ಲಿ, ಜೂ.16: ಪಕ್ಷದ ಹಿರಿಯ ಮುಖಂಡ ಕುಮಾರ್ ವಿಶ್ವಾಸ್ ಅವರನ್ನು ಧಿಕ್ಕರಿಸಿ, ಓಕ್ಲಾ ಶಾಸಕ ಅಮಾನತುಲ್ಲಾ ಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಚ್ಚರಿ ಮೂಡಿಸಿದ್ದಾರೆ.
ವಿಶ್ವಾಸ್ ಅವರನ್ನು ಸಮಾಧಾನಪಡಿಸುವ ಸಲುವಾಗಿ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ ಖಾನ್ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಹುಲ್ಲುಹಾಸಿನಲ್ಲಿ ಆಯೋಜಿಸಿದ್ದ ಇಫ್ತಾರ್ನಲ್ಲಿ ಕೇಜ್ರಿ ಪಾಲ್ಗೊಂಡರು. 102ನೇ ವಾರ್ಡ್ನ ಪಾಲಿಕೆ ಸದಸ್ಯ ಅಬ್ದುಲ್ ವಜೀದ್ ಖಾನ್ ಅವರೂ ಕೂಟದಲ್ಲಿ ಹಾಜರಿದ್ದರು. ಎಎಪಿಯ ಓಕ್ಲಾ ಘಟಕ ಕೂಟವನ್ನು ಆಯೋಜಿಸಿತ್ತು.
"ಮೂಲಭೂತವಾದಿಗಳು ದೇಶದಲ್ಲಿ ಹಿಂದಿನಿಂದ ಮೂಗು ತೂರಿಸುತ್ತಿದ್ದಾರೆ. ಅವರನ್ನು ಸೋಲಿಸುವ ಮೂಲಕ ಎಲ್ಲ ಸಮುದಾಯಗಳ ಜನ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಬೇಕು" ಎಂದು ಕೇಜ್ರಿ ಕರೆ ನೀಡಿದರು. ಕೇಜ್ರಿವಾಲ್ ಹಾಗೂ ಖಾನ್ ಒಂದೇ ಕಾರಿನಲ್ಲಿ ಸಮಾರಂಭದಿಂದ ತೆರಳಿದರು. ಪಕ್ಷದ ಧೋರಣೆಗಳ ವಿರುದ್ಧ ಬಹಿರಂಗವಾಗಿಯೇ ಟೀಕಿಸುತ್ತಿರುವ ವಿಶ್ವಾಸ್ ಅವರನ್ನು ಮೂಲೆಗುಂಪು ಮಾಡುವ ಸ್ಪಷ್ಟ ಸಂದೇಶ ಇದು ಎಂದು ಕೇಜ್ರಿ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ.