ಗಾಂಧಿ ಸ್ಮಾರಕ ಈಗ ಪತಂಜಲಿ ಗೋದಾಮು!
ಅಹ್ಮದಾಬಾದ್, ಜೂ.18: ಶಹಾಯಿಬಾಗ್ನ ಹಳೇ ಸರ್ಕಿಟ್ ಹೌಸ್ನಲ್ಲಿರುವ ಗಾಂಧಿ ಸ್ಮಾರಕದಲ್ಲಿ ಕೆಲವು ತಿಂಗಳುಗಳ ಹಿಂದೆ ಕೆಲವು ಕ್ಷಣಗಳನ್ನು ಕಳೆಯುವುದು ಮನಸ್ಸಿಗೆ ಆಹ್ಲಾದ ನೀಡುತ್ತಿತ್ತು. ಆದರೆ, ಇಂದು ಇದು ಸಾಧ್ಯವಿಲ್ಲ. ಯಾಕೆಂದರೆ ಈಗ ಗಾಂಧಿ ಸ್ಮಾರಕ ಒಳಗೆ ಅಡಿ ಇರಿಸಿದರೆ ಪತಂಜಲಿ ತುಪ್ಪ, ಚಾದರ, ಬ್ಯಾನರ್, ಕರಪತ್ರಗಳಿಂದ ತುಂಬಿ ಹೋಗಿರುವ ಗೋದಾಮು ನಿಮ್ಮನ್ನು ಸಾಗತಿಸುತ್ತದೆ.
ಗಾಂಧಿ ಸ್ಮಾರಕ 95 ವರ್ಷ ಹಳೆಯದು. ದೇಶ ದ್ರೋಹದ ಆರೋಪದಲ್ಲಿ ಗಾಂಧೀಜಿ ಅವರಿಗೆ ಶಿಕ್ಷೆ ವಿಧಿಸಲು ಸರ್ಕಿಟ್ ಹೌಸ್ನ ಈ ಕೊಠಡಿಯನ್ನು ನ್ಯಾಯಾಲಯವಾಗಿ ಬಳಸಲಾಗಿತ್ತು. ಆದರೆ, ಇದು ಈಗ ಬಾಬಾ ರಾಮ್ದೇವ್ ಸ್ಥಾಪಿಸಿದ ಪತಂಜಲಿಯ ಆಯುರ್ವೇದಿಕ್ ಲಿಮಿಟೆಡ್ನ ಮಳಿಗೆಯಾಗಿ ಪರಿವರ್ತಿತವಾಗಿದೆ. ಸರ್ಕಿಟ್ ಹೌಸ್ನಲ್ಲಿರುವ 28 ಕೊಠಡಿಗಳಲ್ಲಿ 12 ಕೊಠಡಿಗಳನ್ನು ಮೇ 25ರಂದು ಪತಂಜಲಿಗೆ ನೀಡಲಾಗಿದೆ. ಇಲ್ಲಿನ ಒಂದು ಕೊಠಡಿಯಾಗಿರುವ ಗಾಂಧಿ ಸ್ಮಾರಕ ವನ್ನು ದಾಸ್ತಾನು ಮಳಿಗೆಯಾಗಿ ಪರಿವರ್ತಿಸಲಾಗಿದೆ. ಇತರ ಕೊಠಡಿಗಳಲ್ಲಿ ಪತಂಜಲಿಯ ಸಿಬ್ಬಂದಿ ವಾಸಿಸುತ್ತಿದ್ದಾರೆ.
ಈ ಸ್ಮಾರಕವನ್ನು ಪತಂಜಲಿ ಬಳಸಲು ಪರವಾನಿಗೆ ನೀಡಿದವರು ಯಾರು ಎಂಬ ಪ್ರಶ್ನೆಗೆ ಅಹ್ಮದಾಬಾದ್ನ ಎಲ್ಲ ಸರ್ಕಿಟ್ ಹೌಸ್ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಹಾಯಿಬಾಗ್ನ ಉಪ ವಲಯದ ಉಪ ಕಾರ್ಯಕಾರಿ ಎಂಜಿನಿಯರ್ ಚಿರಾಗ್ ಪಟೇಲ್, ಸ್ಮತಿ ಕೊಠಡಿಯನ್ನು ಮಳಿಗೆಯಾಗಿ ಬಳಸಲು ಅನುಮತಿ ನೀಡಿದವರು ಯಾರು ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಸ್ಮತಿ ಕೊಠಡಿಯನ್ನು ಪಂತಜಲಿ ದಾಸ್ತಾನು ಮಳಿಗೆಯಾಗಿ ಬಳಸುತ್ತಿದೆ ಎಂಬ ಬಗ್ಗೆ ನನಗೆ ಅರಿವಿಲ್ಲ ಎಂದು ಗುಜರಾತ್ನ ಉಪ ಮುಖ್ಯಮಂತ್ರಿ ನಿತೀನ್ ಪಟೇಲ್ ಹೇಳಿದ್ದಾರೆ.
ಬ್ರಿಟಿಶ್ ಆಡಳಿತದ ಸಂದರ್ಭ ಸರ್ಕಿಟ್ ಹೌಸ್ನಲ್ಲಿರುವ ಈ ಕೊಠಡಿಯನ್ನು 1992 ಮಾರ್ಚ್ 18ರಂದು ನ್ಯಾಯಾಲಯವಾಗಿ ಪರಿವರ್ತಿಸಲಾಗಿತ್ತು. ಇದೇ ನ್ಯಾಯಾಲಯದಲ್ಲಿ ಗಾಂಧೀಜಿ ರಾಜದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಆರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು.