ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಇರಿದು ಕೊಂದ ಪತಿ
ದಿಲ್ಲಿ, ಜೂ.21: ಪತಿಯೋರ್ವ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಈಶಾನ್ಯ ದಿಲ್ಲಿಯ ದಿಲ್ಷಾದ್ ಗಾರ್ಡನ್ ಎಂಬಲ್ಲಿ ನಡೆದಿದೆ. ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿರುವ ವಿನೋದ್ ಬಿಷ್ಟ್ ಎಂಬಾತ ಪತ್ನಿ ರೇಖಾಳಿಗೆ ಅನೈತಿಕ ಸಂಬಂಧವಿದೆ ಎಂಬ ಸಂಶಯದಿಂದ ಆಕೆಯ ಜೊತೆ ಕೆಲವು ಬಾರಿ ಜಗಳವಾಡಿದ್ದ. ಬುಧವಾರ ಸಂಜೆಯ ವೇಳೆ ಬಿಷ್ಟ್ ಒಂದು ಬ್ಯಾಗ್ನೊಂದಿಗೆ ಮನೆಗೆ ಆಗಮಿಸಿದ್ದು ಬಳಿಕ ದಂಪತಿ ಮಧ್ಯೆ ವಾಗ್ವಾದ ನಡೆದಿದೆ.
ಬಿಷ್ಟ್ ಸೋದರನ ಮನೆಯೂ ಇವರಿದ್ದ ಫ್ಲಾಟ್ನ ಮಹಡಿಯಲ್ಲೇ ಇತ್ತು. ಇದಕ್ಕೆ ಹೊರಗಿನಿಂದ ಚಿಲಕ ಜಡಿದ ಬಿಷ್ಟ್, ತನ್ನ ಬ್ಯಾಗಿನಿಂದ ಚೂರಿಯೊಂದನ್ನು ಹೊರತೆಗೆದು ರೇಖಾಳ ಮೇಲೆ ಆಕ್ರಮಣ ನಡೆಸಿ ಒಟ್ಟು 35 ಬಾರಿ ಪತ್ನಿಯನ್ನು ಚೂರಿಯಿಂದ ಇರಿದಿದ್ದಾನೆ. ರೇಖಾ ಸಹಾಯಕ್ಕಾಗಿ ಚೀರಾಡಿದಾಗ ಪುತ್ರ ಸಹಾಯಕ್ಕೆ ಧಾವಿಸಿದ್ದು ಆತನ ಮೇಲೂ ಬಿಷ್ಟ್ ದಾಳಿ ನಡೆಸಿದ್ದಾನೆ. ಈ ಮಧ್ಯೆ ಪುತ್ರ ಸಹಾಯಕ್ಕಾಗಿ ಬೊಬ್ಬೆ ಹಾಕಿದಾಗ ಬಿಷ್ಟ್ ಪರಾರಿಯಾಗಿದ್ದಾನೆ . ಗಾಯಗೊಂಡ ರೇಖಾ ಮತ್ತು ಆಕೆಯ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರೇಖಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.