ಪೊಲೀಸ್ ಅಧಿಕಾರಿಯನ್ನು ಥಳಿಸಿ ಕೊಂದರು..!
ಶ್ರೀನಗರ, ಜೂ.23: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿ ಅವರಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಹಟ್ಟಾದಲ್ಲಿರುವ ಜಾಮೀಯಾ ಮಸ್ಜಿದ್ ಸಮೀಪ ಶುಕ್ರವಾರ ನಡೆದಿದೆ.
ಡಿವೈಎಸ್ಪಿ ಮುಹಮ್ಮದ್ ಆಯುಬ್ ಪಂಡಿತ್ ಎಂಬುವವರೇ ದುಷ್ಕರ್ಮಿಗಳ ಕೈಗೆ ಸಿಕ್ಕಿ ಹುತಾತ್ಮನಾದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಮಧ್ಯರಾತ್ರಿ 12.30ರ ಹೊತ್ತಿಗೆ ಜಾಮೀಯಾ ಮಸ್ಜಿದ್ ಸಮೀಪ ಕರ್ತವ್ಯ ನಿರತ ಆಯುಬ್ ಪಂಡಿತ್ ಮಸ್ಜಿದ್ ಹೊರಭಾಗದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಪಂಡಿತ್ ಅವರನ್ನು ಹಿಡಿದು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಆಯುಬ್ ಅವರು ಸ್ವರಕ್ಷಣೆಗಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿ, ಸ್ಥಳದಿಂದ ಓಡಲು ಯತ್ನಿಸಿದ್ದಾರೆ. ಆದರೆ, ಈ ವೇಳೆ ಉದ್ರಿಕ್ತ ಗುಂಪು ಅಧಿಕಾರಿಯನ್ನು ಬೆನ್ನಟ್ಟಿ ಹಿಡಿದು ಹೊಡೆದು ಹತ್ಯೆ ಮಾಡಿದ್ದಾರೆ.
ಆಯುಬ್ ಅವರು ಗುಂಡು ಹಾರಿಸಿದ್ದರಿಂದಾಗಿ ಮೂವರು ನಾಗರಿಕರಿಗೆ ಗಾಯಗಳಾಗಿವೆ. ಪಂಡಿತ್ ಅವರೊಟ್ಟಿಗೆ ಇದ್ದ ಭದ್ರತಾ ಸಿಬ್ಬಂದಿ ಗಳು ದುಷ್ಕರ್ಮಿಗಳಿಗೆ ಬೆದರಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಡಿವೈಎಸ್ಪಿ ಮುಹಮ್ಮದ್ ಆಯುಬ್ ಪಂಡಿತ್ ಹಲವು ಸಮಯಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಆದರೆ ಅವರು ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.