ಗೋಮಾಂಸ ಹೊಂದಿದ್ದಾನೆಂಬ ಆರೋಪ : ರೈಲಿನಲ್ಲಿ ವ್ಯಕ್ತಿಯ ಇರಿದು ಕೊಲೆ
ಸೀಟು ವಿಚಾರದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತು ಎನ್ನುವ ಪೊಲೀಸರು
ಹೊಸದಿಲ್ಲಿ,ಜೂ.23 : ಮಥುರಾಗೆ ತೆರಳುತ್ತಿದ್ದ ರೈಲಿನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆಂಬ ಶಂಕೆಯಲ್ಲಿ ಪ್ರಯಾಣಿಕರು ವ್ಯಕ್ತಿಯೊಬ್ಬನನ್ನು ಇರಿದು ಕೊಂದು ಆತನ ಇಬ್ಬರು ಸೋದರ ಸಂಬಂಧಿಗಳನ್ನು ಗಾಯಗೊಳಿಸಿದ ಘಟನೆ ಶುಕ್ರವಾರ ವರದಿಯಾಗಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಜುನೈದ್ ಎಂದು ಗುರುತಿಸಲಾಗಿದೆ. ಜುನೈದ್ ಮತ್ತಾತನ ಸಂಬಂಧಿಗಳಾದ ಹಾಶಿಂ ಹಾಗೂ ಶಾಖಿರ್ ದಿಲ್ಲಿಯ ಸದರ್ ಬಝಾರ್ ಪ್ರದೇಶದಲ್ಲಿ ಈದ್ ಗಾಗಿ ಶಾಪಿಂಗ್ ಮುಗಿಸಿ ಹರ್ಯಾಣದ ಬಲ್ಲಭ್ಘರ್ ನಲ್ಲಿರುವ ತಮ್ಮ ಮನೆಗೆ ಹಿಂದಿರುಗಲು ಗಾಝಿಯಾಬಾದ್-ದಿಲ್ಲ-ಮಥುರಾ ರೈಲನ್ನು ಹತ್ತಿದ್ದರು. ಆದರೆ ಒಖ್ಲಾ ನಿಲ್ದಾಣದ ಸಮೀಪ ಅವರ ಹಾಗೂ ಇತರ ಪ್ರಯಾಣಿಕರ ನಡುವೆ ಸೀಟಿನ ವಿಚಾರದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಪ್ರಯಾಣಿಕರು ಜುನೈದ್ ಹಾಗೂ ಆತನ ಸಂಬಂಧಿಗಳ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದರೆಂದು ಪೊಲೀಸರು ಹೇಳಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜುನೈದ್ ನ ಪ್ರಾಣ ಉಳಿಸಲಾಗಲಿಲ್ಲ.
ಸಂತ್ರಸ್ತರು ಗೋಮಾಂಸ ಹೊಂದಿದ್ದರು ಎಂಬ ಕಾರಣಕ್ಕೆ ದಾಳಿ ನಡೆಯಿತು ಎಂದು ಹೇಳಲಾಗಿದೆಯಾದರೂ ರೈಲ್ವೇ ಪೊಲೀಸರು ಇದೊಂದು ಸೀಟಿನ ವಿಚಾರದಲ್ಲುಂಟಾದ ಜಗಳ ಎಂದು ಹೇಳಿಕೊಂಡಿದ್ದಾರೆ.
ಹರ್ಯಾಣದ ಪಲ್ವಲ್ ಸರಕಾರಿ ಆಸ್ಪತ್ರೆಯಲ್ಲಿ ಜುನೈದ್ ನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆತನ ಇಬ್ಬರು ಸಹೋದರರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ. ಗಾಯಾಳು ಹಾಶಿಂ ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.