“ಸರಕಾರದ ಸಾಧನೆಯ ಪುಸ್ತಕ ಓದಿ, ಪ್ರಶ್ನೆಗಳನ್ನು ಕೇಳಬೇಡಿ” ಪರ್ತಕರ್ತರಿಗೆ ಆದಿತ್ಯನಾಥ್ ಸರಕಾರದ ತಾಕೀತು
ಲಕ್ನೋ, ಜೂ.27: ಆದಿತ್ಯನಾಥ್ ಸರಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಸುಮಾರು 200 ಪತ್ರಕರ್ತರಿಗೆ ಯಾವುದೇ ಪ್ರಶ್ನೆಗಳನ್ನು ಕೇಳದಂತೆ ನಿರ್ಬಂಧ ವಿಧಿಸಲಾಗಿತ್ತು. 15 ನಿಮಿಷಗಳ ಕಾಲ ತನ್ನ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಆದಿತ್ಯನಾಥ್ , ತನ್ನ ಆಡಳಿತದಿಂದ ತೃಪ್ತಿ ಹೊಂದಿದ್ದೇನೆ ಎಂದರು.
ಈ ಸಂದರ್ಭ ಓರ್ವ ಪತ್ರಕರ್ತನಿಗೆ ಪ್ರಶ್ನೆಗಳನ್ನು ಕೇಳದೆ ಮಾತನಾಡಲು ಅವಕಾಶ ನೀಡಲಾಯಿತು. ಸಣ್ಣ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಆದಿತ್ಯನಾಥ್, ನಮ್ಮ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಯೋಜನೆಯ ಅಂಗವಾಗಿದ್ದೀರಿ ಎಂದು ಪತ್ರಿಕಾಗೋಷ್ಠಿಯನ್ನು ಮುಗಿಸಿದರು.
ರೈತರ ಸಾಲಮನ್ನಾ, ಕಾನೂನು ಮತ್ತು ರಾಜ್ಯದ ಸುವ್ಯವಸ್ಥೆ ಹಾಗೂ ರಾಜ್ಯದಲ್ಲಿನ ಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಲಾಯಿತು. “ನಮ್ಮ ಪುಸ್ತಕ ಓದಿ ನಂತರ ಪ್ರಶ್ನೆಗಳನ್ನು ಕೇಳಿ ಎಂದು ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು. ಸರಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಗಿತ್ತು.
“ಪತ್ರಕರ್ತರು ಪೂರ್ವಯೋಜಿತ ಪ್ರಶ್ನೆಗಳೊಂದಿಗೆ ಬರುತ್ತಾರೆ. ನಮ್ಮ ಸರಕಾರದ ಸಾಧನೆಗಳ ಬಗೆಗಿನ ಪುಸ್ತಕವನ್ನು ನಾವು ನೀಡಿದ್ದೇವೆ. ನೀವು ಅದನ್ನು ಓದುವುದಿಲ್ಲ, ಆದರೆ ಪ್ರಶ್ನೆಗಳನ್ನು ಕೇಳುತ್ತೀರಿ” ಎಂದು ಸಿಂಗ್ ಹೇಳಿದರು.