ಭಾರತ ಚೀನಾಕ್ಕೆ ಹೆದರುತ್ತಿದೆ: ಅಸ್ಸಾಂ ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ,ಜು.1: ಸಿಕ್ಕಿಂ ಗಡಿಯಲ್ಲಿ ಕಳೆದ ದಿವಸ ಚೀನಾದ ಸೈನಿಕರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಚೀನಾದ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲಸಿದೆ.ಈ ನಡುವೆ, ಅಸ್ಸಾಂ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ನೀಡಿದ ಹೇಳಿಕೆ ವಿವಾದಾಸ್ಪದವಾಗಿದೆ. " ಭಾರತ, ಚೀನದೊಂದಿಗೆ ಯುದ್ಧ ಮಾಡಲಾರದು.
ಚೀನಾ ನಮಗಿಂತ ಎರಡು ವರ್ಷ ಮೊದಲು ಅಥವಾ ನಂತರ ಸ್ವತಂತ್ರಗೊಂಡಿದೆ.ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾವು ಚೀನಾಕ್ಕೆ ಹೆದರುತ್ತಿದ್ದೇವೆ. ಚೀನಾ ಶಕ್ತಿಯಲ್ಲಿ ಇಂದು ನಮಗಿಂತ ತುಂಬ ಮುಂದಿದೆ" ಎಂದು ರಾಜ್ಯಪಾಲ ಪುರೋಹಿತ್ ಹೇಳಿದರು. ಈ ಹೇಳಿಕೆ ಈಗ ವಿವಾದಕ್ಕೊಳಗಾಗಿದೆ.
ರಾಜ್ಯಪಾಲರ ಪ್ರಕಾರ ಭ್ರಷ್ಚಾರವಿಲ್ಲದಿರುತ್ತಿದ್ದರೆ ಭಾರತ, ಚೀನಾವನ್ನು ಎದುರಿಸಿ ನಿಲ್ಲುತ್ತಿತ್ತು. ಭ್ರಷ್ಟಾಚಾರದ ರಾಕ್ಷಸ ಭಾರತವನ್ನು ನಾಶಮಾಡಿದೆ.
ಎರಡುವಾರದ ಹಿಂದೆ ಚೀನದ ಸೈನಿಕರು ಸಿಕ್ಕಿಂನಲ್ಲಿ ಭಾರತದ 2 ಬಂಕರ್ಗಳನ್ನುನಾಶಗೈದಿದ್ದರು. ಆನಂತರ ಅಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಉಭಯ ದೇಶಗಳ ಗಡಿಯಲ್ಲಿ ನೆಲೆಸಿದ ಉದ್ವಿಗ್ನ ಸ್ಥಿತಿಯನ್ನು ನೋಡಿ ವಿವಾದವಿರುವ ಸ್ಥಳದಲ್ಲಿ ಮೂರುಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ. ಚೀನ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಭಾರತ ಗಡಿಯನ್ನು ಉದ್ವಿಗ್ನಗೊಳಿಸುವ ಮೊದಲು 1962ರ ಯುದ್ಧಪರಿಣಾಮವನ್ನು ನೆನಪಿಸಿಕೊಳ್ಳಬೇಕು ಎಂದಿದೆ. ಇದಕ್ಕೆ ಉತ್ತರ ನೀಡಿದಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ 2017ರ ಭಾರತ 1962ರ ಭಾರತವಲ್ಲ ಎಂದು ತಿರುಗೇಟು ನೀಡಿದ್ದಾರೆ.