ಬದ್ರಿನಾಥ್ ಅರ್ಚಕನಿಂದ ಲೈಂಗಿಕ ಕಿರುಕುಳ: ಸಾಧ್ವಿ ಆರೋಪ
ಡೆಹ್ರಾಡೂನ್, ಜು. 1: ಬದ್ರಿನಾಥ್-ಕೇದಾರನಾಥ್ ದೇಗುಲ ಸಮಿತಿ ಸಿಇಒ ಹಾಗೂ ಬದ್ರಿನಾಥ್ ದೇಗುಲದ ಅರ್ಚಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಾರಾಷ್ಟ್ರದ ಸಾಧ್ವಿಯೊಬ್ಬರು ಆರೋಪಿಸಿದ್ದಾರೆ.
ಜೂನ್ನಲ್ಲಿ ಬದ್ರಿನಾಥ್ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಅರ್ಚಕ ವಿಷ್ಣು ಪ್ರಸಾದ್ ನಂಬೂದಿರಿ ಹಾಗೂ ಸಿಇಒ ಬಿ.ಡಿ. ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮುಂಬೈ ಮೂಲದ ಸಾಧ್ವಿ ಆರೋಪಿಸಿದ್ದಾರೆ ಎಂದು ಚಮೋಲಿ ಪೊಲೀಸ್ ಅಧೀಕ್ಷಕ ತ್ರಿಪಾಠಿ ಭಟ್ ತಿಳಿಸಿದ್ದಾರೆ.
ಐಪಿಸಿಯ ಪ್ರಸಕ್ತ ಕಲಮುಗಳ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರೂ ನನಗೆ ಬೆದರಿಕೆ ಒಡ್ಡುತ್ತಿದ್ದಾರೆ. ಮುಂಬೈಯಲ್ಲಿರುವ ನನ್ನ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನನ್ನ ಕುಟುಂಬದ ಸದಸ್ಯರು ನಿಗೂಢವಾಗಿ ನಾಪತ್ತೆಯಾಗಿರುವುದರಲ್ಲಿ ನನ್ನ ಪಾತ್ರ ಇರುವುದಾಗಿ ಹೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಾಧ್ವಿ ಆಸ್ತಿಯನು ಕಬಳಿಸಲು ಪ್ರಯತ್ನಿಸುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬದ್ರಿನಾಥ್ ದೇಗುಲದ ಅರ್ಚಕರ ಬಗ್ಗೆ ಈ ಹಿಂದೆ ಕೂಡ ಇದೇ ರೀತಿಯ ಆರೋಪ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ದಿಲ್ಲಿಯ ಹೋಟೆಲೊಂದರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2014 ಫೆಬ್ರವರಿಯಲ್ಲಿ ಬದ್ರಿನಾತ್ ದೇಗುಲದ ಅರ್ಚಕ ಕೇಶವ ಪ್ರಸಾದ್ ನಂಬೂದಿರಿಯನ್ನು ಬಂಧಿಸಲಾಗಿತ್ತು.