ರಕ್ತದ ಮಡುವಿನಲ್ಲಿ ಬಿದ್ದು ಸಹಾಯ ಯಾಚಿಸುತ್ತಿದ್ದ ಮಹಿಳೆಯ ವಿಡಿಯೋ ಮಾಡಿದ ಜನರು!
ಡಿಜಿಟಲ್ ಯುಗದಲ್ಲಿ ನಶಿಸುತ್ತಿರುವ ಮನುಷ್ಯತ್ವ
ಜಿಂದ್ (ಹರ್ಯಾಣ)ಜು.3: ಮಾನವ ಡಿಜಿಟಲ್ ಯುಗದಲ್ಲಿದ್ದಾನೆ, ಆದರೆ ಮನುಷ್ಯತ್ವ ಮಾತ್ರ ನಶಿಸುತ್ತಿದೆ. ಜಿಂದ್ನ ಬರೋಲಿ ಗ್ರಾಮದಲ್ಲಿ ನಡೆದಿರುವ ಘಟನೆ ಇದಕ್ಕೊಂದು ಅಪ್ಪಟ ನಿದರ್ಶನವಾಗಿದೆ. ಗರಗಸದಿಂದ ಗಂಡ ನಡೆಸಿದ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಮನೆಯ ಹೊರಗೆ ರಕ್ತದ ಮಡುವಲ್ಲಿ ಬಿದ್ದಿದ್ದ ಮೂವರು ಮಕ್ಕಳ ತಾಯಿ ನೆರವಿಗಾಗಿ ಬೊಬ್ಬೆ ಹೊಡೆಯುತ್ತಿದ್ದರೆ ನೆರೆಕರೆಯವರು ಆಕೆಯ ನೆರವಿಗೆ ಧಾವಿಸುವ ಬದಲು ಆ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸುತ್ತಿದ್ದರು!
ಗಾಯಗೊಂಡ ಮಹಿಳೆ ಸಂಜು ಈಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಳಾದರೂ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿಡಿಯೋವನ್ನು ಆನ್ಲೈನ್ನಲ್ಲಿ ಸಹಸ್ರಾರು ಜನರು ವೀಕ್ಷಿಸಿದ್ದಾರೆ. ‘‘ನಾನು ಸಾಯುತ್ತಿದ್ದೇನೆ, ಯಾರಾದರೂ ನನಗೆ ನೆರವಾಗಿ’ ಎಂದು ಸಂಜು ಸಾವಿನ ಭೀತಿಯಿಂದ ಆಕ್ರಂದನ ಮಾಡುವ ವೀಡಿಯೊ ಎಂಥವರ ಮನಸ್ಸನ್ನೂ ಕಲಕುತ್ತದೆ.
ಶುಕ್ರವಾರ ಈ ಘಟನೆ ನಡೆದಿದೆ. ಸಂಜು ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಮರಳಿದಾಗ ಗಂಡ ನರೇಶ ಮದ್ಯ ಸೇವಿಸುತ್ತಿದ್ದ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ ಆತ ಎರಡು ಅಡಿ ಉದ್ದದ ಗರಗಸದಿಂದ ಆಕೆಯ ಹೊಟ್ಟೆ, ಭುಜ ಮತ್ತು ಮೊಳಕಾಲಿಗೆ ಹಲ್ಲೆ ನಡೆಸಿದ್ದ. ಅಲ್ಲಿಂದ ಪರಾರಿಯಾಗುವ ಮುನ್ನ ಕೊಲ್ಲುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಿದ್ದ.
ಪೊಲೀಸರು ಬಂದು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವವರೆಗೂ ಸುಮಾರು ಒಂದು ಗಂಟೆ ಕಾಲ ಸಂಜು ರಕ್ತದ ಮಡುವಿನಲ್ಲಿಯೇ ಬಿದ್ದಿದ್ದಳು ಮತ್ತು ನೆರೆಕರೆಯವರು ತಮ್ಮ ಮೊಬೈಲ್ನಲ್ಲಿ ಆ ದೃಶ್ಯದ ವೀಡಿಯೊ ತೆಗೆಯುತ್ತಲೇ ಇದ್ದರು. ಪತ್ನಿ ತನಗೆ ಮೋಸ ಮಾಡಿದ್ದಾಳೆಂದು ಆರೋಪಿಸಿ ಈ ಕೃತ್ಯವೆಸಗಿದ ನರೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಡನಿಂದ ಕಿರುಕುಳದ ವಿರುದ್ಧ ಸಂಜು ಈ ಹಿಂದೆ ಪೊಲೀಸರಿಗೆ ದೂರನ್ನೂ ನೀಡಿದ್ದಳು.