ಶೀಘ್ರ ಕಾವ್ಯಾಮಾಧವನ್ ಸಹಿತ ಇನ್ನಷ್ಟು ತಾರೆಯರ ವಿಚಾರಣೆ
ಕೊಚ್ಚಿ,ಜು.15: ನಟಿಯನ್ನು ಅಪಹರಿಸಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಕಾವ್ಯಾಮಾಧವನ್, ನಾದಿರ್ ಶಾ ಸಹಿತ ಸಿನೆಮಾ ಕ್ಷೇತ್ರದ ಇತರ ತಾರೆಯರನ್ನು ಕೂಡಾ ಪ್ರಶ್ನಿಸಲಾಗುವುದು. ನಟಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಮತ್ತು ಅದರ ನಂತರ ಆರೋಪಿಯನ್ನು ರಕ್ಷಿಸುವುದರಲ್ಲಿ ನಾದಿರ್ಶಾ ಶಾಮೀಲಾಗಿದ್ದಾರೆಯೇ ಎಂದು ಸ್ಪಷ್ಟಪಡಿಸಲಿಕ್ಕಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಪೊಲೀಸರ ವಿಚಾರಣೆಗೆ ದಿಲೀಪ್ ಸಹಕರಿಸದಿರುವ ಹಿನ್ನೆಲೆಯಲ್ಲಿ ನಾದಿರ್ಶಾ ಮತ್ತು ದಿಲೀಪ್ರ ಪತ್ನಿ ಕಾವ್ಯಾಮಾಧವನ್ರನ್ನು ಪ್ರಶ್ನಿಸುವುದು ಪೊಲೀಸರಿಗೆ ಅನಿವಾರ್ಯವಾಗಿದೆ.
ಕಾವ್ಯಾರ ಕಾಕ್ಕನಾಟ್ಟ ಜವಳಿ ಸಂಸ್ಥೆಗೆ ಸುನೀ ಬಂದುಹೋಗಿರುವುದರ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದೆ. ಆರೋಪಿ ಪಲ್ಸರ್ ಸುನೀ ದಿಲೀಪ್ಗೆ ಕಳುಹಿಸಿದ್ದ ಪತ್ರವನ್ನು ಕಾಕ್ಕನಾಟ್ಟ ಸಂಸ್ಥೆಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಪುರಾವೆಗಳ ಆಧಾರದಲ್ಲಿ ಕಾವ್ಯಾರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕಾವ್ಯಾ ಮತ್ತು ನಾದಿರ್ಶಾ ಸಂಚು ಹೆಣೆಯುವುದರಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಸಂದೇಹಕ್ಕೆ ಉತ್ತರ ಕಂಡುಕೊಳ್ಳುವುದು ಪೊಲೀಸರ ಉದ್ದೇಶವಾಗಿದೆ.
ಕಾವ್ಯಾಮಾಧವನ್ರ ಸಂಸ್ಥೆಯ ಸಿಸಿಟಿವಿ ದೃಶ್ಯಗಳ ಹೆಚ್ಚಿನ ಪರಿಶೀಲನೆಗೆ ಕಳುಹಿಸಲಾಗಿದೆ. ಈವರೆಗೆ ಅದರ ಫಲಿತಾಂಶ ಸಿಕ್ಕಿಲ್ಲ.
ಕಾವ್ಯಾ, ನಾದಿರ್ಶಾ ಮಾತ್ರವಲ್ಲ ಸಿನೆಮಾ ರಂಗದ ಇತರ ನಟ, ನಟಿಯರನ್ನು ಕೂಡಾ ಪ್ರಶ್ನಿಸಲು ಪೊಲೀಸರು ಯೋಚಿಸಿದ್ದಾರೆ.
2013ರಲ್ಲಿ ಅಮ್ಮ ರಿಹರ್ಸಲ್ನ ವೇಳೆ ಕಿರುಕ್ಕುಳಕ್ಕೊಳಗಾದ ನಟಿ ಮತ್ತು ದಿಲೀಪ್ರ ನಡುವೆ ದೊಡ್ಡ ವಾಗ್ವಾದ ನಡೆದಿತ್ತು. ಈ ವಾಗ್ವಾದದ ಪ್ರತ್ಯಕ್ಷದರ್ಶಿಗಳನ್ನು ಮತ್ತು ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸಿದವರನ್ನು ಪ್ರಶ್ನಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.