ಹೈಕೋರ್ಟ್ ಗೆ ಇಂದು ದಿಲೀಪ್ ಜಾಮೀನು ಅರ್ಜಿ ಸಲ್ಲಿಕೆ
ಕೊಚ್ಚಿ,ಜು. 17: ನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದಿಲೀಪ್ ಇಂದು ಹೈಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಅಂಗಮಾಲಿ ಮ್ಯಾಜಿಸ್ಟ್ರೇಟ್ ಕೋರ್ಟು ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದಿಲೀಪ್ ಹೈಕೋರ್ಟಿನ ಮೊರೆಹೋಗುತ್ತಿದ್ದಾರೆ.
ಜಿಲ್ಲಾ ಸೆಶನ್ಸ್ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿಸಲ್ಲಿಸುವ ಅವಕಾಶ ಇದ್ದರೂ ನೇರವಾಗಿ ಹೈಕೋರ್ಟಿನ ಮೊರೆ ಹೋಗಲಾಗುತ್ತಿದೆ. ದಿಲೀಪ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರೂ ಅದನ್ನು ವಿರೋಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೇಸ್ ಡೈರಿ ಮುಂತಾದುವುಗಳನ್ನು ಹಾಜರುಪಡಿಸಿ ರಿಮಾಂಡ್ ಸಮಯವನ್ನು ವಿಸ್ತರಿಸುವ ಉದ್ದೇಶ ಪೊಲೀಸರದ್ದಾಗಿದೆ.
ಜಾಮೀನು ಸಿಕ್ಕಿದರೆ ದಿಲೀಪ್ ಕಿರುಕುಳಕ್ಕೊಳಗಾದ ನಟಿಯ ವಿರುದ್ಧ ಪುನಃ ಆಕ್ಷೇಪಾರ್ಹ ಹೇಳಿಕೆ ನೀಡಬಹುದು, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ದಿಲೀಪ್ ಪರ ಪ್ರಚಾರ ಅವರ ಪ್ರಭಾವವನ್ನು ತೋರಿಸುತ್ತಿದೆ ಎಂದು ಪ್ರಾಸಿಕ್ಯೂಶನ್ ವಾದಿಸಿದೆ.
ಅದೇವೇಳೆ, ಪ್ರಕರಣದಲ್ಲಿ ಶಾಸಕರಾದ ಪಿ.ಟಿ. ಥಾಮಸ್, ಅನ್ವರ್ ಸಾದಾತ್ರನ್ನುಪ್ರಶ್ನಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಸಾಕ್ಷ್ಯ ನೀಡಲು ಹಾಜರಾಗಬೇಕೆಂದು ಇಬ್ಬರಿಗೂ ನೋಟಿಸ್ ಕಳುಹಿಸಲಾಗಿದೆ.