ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ತಂದೆಗೆ ಚೂರಿಯಿರಿತ ,ಹಣ ಲೂಟಿ
ರೋಹ್ಟಕ್(ಹರ್ಯಾಣ),ಜು.17: ಮಾಜಿ ಭಾರತೀಯ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ತಂದೆ ಓಂ ಪ್ರಕಾಶ ಶರ್ಮಾ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಗಾಯಗೊಳಿಸಿ, ಅವರ ಬಳಿಯಿದ್ದ ಹಣವನ್ನು ದೋಚಿದ್ದಾರೆ.
ಶರ್ಮಾ(68) ಇಲ್ಲಿಯ ಕಾಥಮಂಡಿ ಬಳಿ ಸಿಹಿತಿಂಡಿಗಳ ಅಂಗಡಿ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಅವರ ಅಂಗಡಿಗೆ ಬಂದಿದ್ದ 20ರ ಹರೆಯದ ಯುವಕರಿಬ್ಬರು ತಂಪು ಪಾನೀಯ ಮತ್ತು ಸಿಗರೇಟ್ ಖರೀದಿಯ ನೆಪದಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಜೇಬಿನಲ್ಲಿದ್ದ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಶರ್ಮಾ ಪ್ರತಿರೋಧಿಸಿದಾಗ ಅವರ ಪೈಕಿ ಓರ್ವ ಚೂರಿಯಿಂದ ಅವರ ಹೊಟ್ಟೆಗೆ ಇರಿಯಲು ಮುಂದಾಗಿದ್ದ. ಶರ್ಮಾ ಅದನ್ನು ತಡೆದಾಗ ಕೈಗಳಿಗೆ ಗಾಯವಾಗಿದ್ದು, ಅಂಗಡಿಯೊಳಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ 7,000 ರೂ.ಗಳನ್ನು ದೋಚಿದ್ದಾರೆ. ಗಾಯಾಳು ಶರ್ಮಾರನ್ನು ಅಂಗಡಿಯೊಳಗೆ ತಳ್ಳಿ ಹೊರಗಿನಿಂದ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.
ಶರ್ಮಾ ಕರೆಯ ಮೇರೆಗೆ ಅವರ ಕಿರಿಯ ಪುತ್ರ ದೀಪಕ್ ಧಾವಿಸಿ ಬಂದು ಅಂಗಡಿಗೆ ಹಾಕಿದ್ದ ಬೀಗವನ್ನು ಒಡೆದು ತಂದೆಯನ್ನು ರಕ್ಷಿಸಿದ್ದಾರೆ. 2007ರ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಓವರ್ ಎಸೆದಿದ್ದ ಜೋಗಿಂದರ್ ಶರ್ಮಾ11 ಹಾಲಿ ಹಿಸ್ಸಾರ್ನಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿದ್ದಾರೆ.