ಸುನಂದಾ ಪುಷ್ಕರ್ ಸಾವು ಪ್ರಕರಣ: ಸ್ಥಿತಿಗತಿ ವರದಿ ಸಲ್ಲಿಸಲು ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ, ಜು. 20: ಕಾಂಗ್ರೆಸ್ ಸಂಸದ ಶಶಿ ಥರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಕುರಿತು ನಡೆಸುತ್ತಿರುವ ತನಿಖೆಯ ಸ್ಥಿತಿಗತಿ ವರದಿ ದಾಖಲಿಸುವಂತೆ ಹೊಸದಿಲ್ಲಿ ಉಚ್ಚ ನ್ಯಾಯಾಲಯ ನಗರ ಪೊಲೀಸರಿಗೆ ಗುರುವಾರ ಆದೇಶಿಸಿದೆ.
ಪ್ರಕರಣದ ಕುರಿತು ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಬೇಕು ಎಂಬ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅರ್ಜಿ ವಿಚಾರಣೆ ಸಂದರ್ಭ, ಮೂರು ದಿನಗಳ ಒಳಗೆ ಗತಿಸ್ಥಿತಿ ವರದಿ ದಾಖಲಿಸುವಂತೆ ನ್ಯಾಯಮೂರ್ತಿ ಜಿ.ಎಸ್. ಸಿಸ್ಠಾನಿ ಹಾಗೂ ಚಂದೇರ್ ಶೇಖರ್ ಅವರನ್ನೊಳಗೊಂಡ ಪೀಠ ಪೊಲೀಸರಿಗೆ ನಿರ್ದೇಶಿಸಿದೆ.
ತನಿಖಾ ಸಂಸ್ಥೆ ಸ್ಥಿತಿಗತಿ ವರದಿಯನ್ನು ಕೋರ್ಟ್ ರೂಮ್ನಲ್ಲಿ ನನಗೆ ಸಲ್ಲಿಸಿದ್ದಾರೆ. ಅದನ್ನು ದಾಖಲಿಸುವ ಮುನ್ನ ಪರಿಶೀಲಿಸಲು ಬಯಸುತ್ತೇನೆ ಎಂದು ಪೊಲೀಸ್ ಪರ ವಕೀಲ ರಾಹುಲ್ ಶರ್ಮಾ ಹೇಳಿದ ಹಿನ್ನೆಲೆಯಲ್ಲಿ ಪೀಠ ಈ ನಿರ್ದೇಶನ ನೀಡಿತು.
ಈ ವಿಷಯದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರೂಪಿಸಲಾಗಿದೆ ಎಂದು ಮೆಹ್ರಾ ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದರು.