ಹೆಚ್ಚು ಮಹಿಳಾ ನ್ಯಾಯಾಧೀಶರ ನೇಮಕಕ್ಕೆ ನ್ಯಾಯಾಂಗವು ಮುಕ್ತವಾಗಿದೆ: ಸರಕಾರ
ಹೊಸದಿಲ್ಲಿ,ಜು.21: ಹೆಚ್ಚಿನ ಮಹಿಳಾ ನ್ಯಾಯಾಧೀಶರ ನೇಮಕಕ್ಕೆ ನ್ಯಾಯಾಂಗವು ಮುಕ್ತವಾಗಿದೆ, ಆದರೆ ಈ ಉದ್ದೇಶಕ್ಕಾಗಿ ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸರಕಾರವು ಹೇಳಿದೆ.
ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕದಲ್ಲಿ ಸರಕಾರದ ಪಾತ್ರ ಸೀಮಿತವಾಗಿದೆ, ಆದರೆ ನಾವು ಅಸಹಾಯಕರಲ್ಲ. ಹೆಚ್ಚಿನ ಮಹಿಳಾ ನ್ಯಾಯಾಧೀ ಶರ ನೇಮಕಕ್ಕಾಗಿ ಕೇಂದ್ರವು ನ್ಯಾಯಾಂಗಕ್ಕೆ ಅರಿವು ಮೂಡಿಸುತ್ತಲೇ ಇರುತ್ತದೆ ಎಂದರು.
ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿಗೆ ಅವಕಾಶವಿಲ್ಲ, ಹೀಗಾಗಿ ಆ ಬಗ್ಗೆ ವಿಚಾರ ಮಾಡುವಂತಿಲ್ಲ. ಆದರೂ ಸರಕಾರವು ಅಲ್ಪಸಂಖ್ಯಾತರು, ಎಸ್ಸಿ ಮತ್ತು ಎಸ್ಟಿಗಳು ಹಾಗೂ ಮಹಿಳೆಯರ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ನ್ಯಾಯಾಂಗಕ್ಕೆ ಹೇಳುತ್ತಲೇ ಇರುತ್ತದೆ ಎಂದ ಅವರು, ಉನ್ನತ ನ್ಯಾಯಾಂಗದಲ್ಲಿ ಹೆಚ್ಚು ಲಿಂಗ ಪ್ರಾತಿನಿಧ್ಯದ ಅಗತ್ಯವಿದೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಲಿಂಗ ನ್ಯಾಯಕ್ಕೆ ವಿರುದ್ಧವಾಗಿದ್ದಾರೆ ಎನ್ನುವುದು ಸರಿಯಲ್ಲ. ನಾನು ಮೂರು ಬಾರಿ ಸಚಿವನಾಗಿದ್ದು, ಈ ಕುರಿತು ಹಿರಿಯ ನ್ಯಾಯಾಧೀಶರೊಂದಿಗೆ ಚರ್ಚಿಸಿದ್ದೇನೆ. ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕಗೊಳಿಸುವ ಬಗ್ಗೆ ಅವರು ಮುಕ್ತ ಮನಸ್ಸು ಹೊಂದಿದ್ದಾರೆ ಎಂದರು.