ರಾಜಸ್ಥಾನದಲ್ಲೊಬ್ಬ ಮಹಿಳೆಯರ ಜಡೆ ಕತ್ತರಿಸುವ ಕಿರಾತಕ
ವೈರಲ್ ಆಗಿರುವ ಭೂತದ ವದಂತಿ
ಮೇವಾತ್,ಜು.28: ಕಳೆದೊಂದು ತಿಂಗಳಿನಿಂದಲೂ ರಾಜಸ್ಥಾನದಲ್ಲಿ ಹಾವಳಿಯೆಬ್ಬಿಸಿ ರುವ, ಮಹಿಳೆಯರ ಜಡೆಗಳನ್ನು ಕತ್ತರಿಸುವ ನಿಗೂಢ ವ್ಯಕ್ತಿ ಈಗ ಮೇವಾತ್ಗೂ ಲಗ್ಗೆಯಿಟ್ಟಿದ್ದಾನೆ. ಕಳೆದ ಐದು ದಿನಗಳಲ್ಲಿ ಈತ ಮೇವಾತ್ನ ಐವರು ಮಹಿಳೆಯರ ಜಡೆಗಳಿಗೆ ಕತ್ತರಿ ಪ್ರಯೋಗ ಮಾಡಿದ್ದಾನೆ. ವಿಚಿತ್ರವೆಂದರೆ ಈತ ಈವರೆಗೂ ಯಾರ ಕಣ್ಣಿಗೂ ಬಿದ್ದಿಲ್ಲ. ಹೀಗಾಗಿ ಇದು ಭೂತದ ಕಾಟವೆಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಸ್ರಿ(40) ಫಿರೋಝ್ಪುರ ಜಿರ್ಕಾದ ಸಕ್ರಾಸ್ ಗ್ರಾಮದ ನಿವಾಸಿಯಾಗಿದ್ದು, ಗಂಡ ಆಸ್ ಮುಹಮ್ಮದ್ ಗ್ರಾಮದ ಸರಪಂಚನಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಆಕೆ ಮನೆಯಲ್ಲಿ ನಮಾಝ್ ಮಾಡುತ್ತಿದ್ದಾಗ ನಿಗೂಢ ವ್ಯಕ್ತಿ ಒಳಪ್ರವೇಶಿಸಿ ಆಕೆಯ ಜಡೆಯನ್ನು ಕತ್ತರಿಸಿ ಪರಾರಿಯಾಗಿದ್ದು,ಆಕೆ ಮಕ್ಕಳು ಶಾಲೆಯಿಂದ ಮರಳುವವರೆಗೂ ಪ್ರಜ್ಞಾಹೀನಳಾಗಿ ನೆಲದಲ್ಲಿ ಬಿದ್ದಿದ್ದಳು.
ಜಾರ್ಪುರಿ ಗ್ರಾಮದಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಮಾನಿಷಾ ಮತ್ತು ಆಕೆಯ ಅತ್ತೆ ಝಹೂರ್ಬಿ ಜಾನುವಾರುಗಳಿಗಾಗಿ ಮೇವನ್ನು ಕತ್ತರಿಸುತ್ತಿದ್ದಾಗ ಹಿಂದಿನಿಂದ ಯಾರೋ ಬಂದಂತಾಗಿದ್ದು,ಏನಾಗುತ್ತಿದೆ ಎನ್ನುವುದು ಗೊತ್ತಾಗುವಷ್ಟರಲ್ಲಿ ಆಕೆಯ ಜಡೆ ಕತ್ತರಿಸಿ ಕೆಳಗೆ ಬಿದ್ದಿತ್ತು. ಘಟನೆಯ ಬಳಿಕ ಮಾನಿಷಾ ಕೂಡ ಪ್ರಜ್ಞೆ ಕಳೆದುಕೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಶಿಕಾರಪುರದ ತಾವ್ರ ಗ್ರಾಮದಲ್ಲಿ ನಡೆದ ಘಟನೆಯಲ್ಲಿಯೂ ಮಹಿಳೆಯೋರ್ವಳು ಜಡೆ ಕತ್ತರಿಸಲ್ಪಟ್ಟ ನಂತರ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಘಟನೆಗಳಲ್ಲಿಯೂ ಮಹಿಳೆಯರು ಯಾರೋ ತಮ್ಮನ್ನು ತಳ್ಳಿದಂತಾಗಿತ್ತು ಮತ್ತು ತಾವು ತಲೆ ತಿರುಗಿ ಬಿದ್ದಿದ್ದೆವು ಎಂದು ಹೇಳಿದ್ದಾರೆ.
ಇಂತಹ ಘಟನೆಗಳ ಬಳಿಕ ಜಿಲ್ಲೆಯಲ್ಲಿ ಮಹಿಳೆಯರು ಭೀತಗೊಂಡಿದ್ದಾರೆ. ವಿಷಯವು ಪೊಲೀಸರವರೆಗೆ ತಲುಪಿದೆಯಾದರೂ ಈವರೆಗೆ ಯಾವುದೇ ಎಫ್ಐಆರ್ ದಾಖಲಾ ಗಿಲ್ಲ.
ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು, ಮಹಿಳೆಯರು ಮೂಢನಂಬಿಕೆಗೆ ಪಕ್ಕಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಾವು ಯಾರನ್ನೂ ನೋಡಿರಲಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದಿದ್ದಾರೆ.
ಭೂತವು ಮಹಿಳೆಯರ ಕೂದಲು ಕತ್ತರಿಸುತ್ತಿದೆ ಎಂಬ ವದಂತಿ ಕಳೆದೊಂದು ತಿಂಗಳಿನಿಂದಲೂ ರಾಜಸ್ಥಾನದಲ್ಲಿ ಹರಿದಾಡುತ್ತಿದೆ. ನಗೋರ್,ಬಾರ್ಮೆರ್,ಜೈಸಲ್ಮೇರ್ ಮತ್ತು ಜೋಧಪುರಗಳಿಂದಲೂ ಇಂತಹ ಘಟನೆಗಳು ವರದಿಯಾಗಿವೆ.