ಪಟಾಕಿಯಲ್ಲಿ ಬಳಸುವ ಐದು ಲೋಹಗಳಿಗೆ ಸುಪ್ರೀಂ ನಿಷೇಧ
ಹೊಸದಿಲ್ಲಿ, ಜು.31: ದೀಪಾವಳಿ ಹಬ್ಬಕ್ಕೆ ಸುಮಾರು ಮೂರು ತಿಂಗಳು ಅವಧಿ ಇರುವಂತೆಯೇ ದೀಪಾವಳಿ ಸಂದರ್ಭ ಹಚ್ಚಲಾಗುವ ಪಟಾಕಿಯ ಉತ್ಪಾದನೆಯಲ್ಲಿ ಐದು ಹಾನಿಕರ ಲೋಹದ ಬಳಕೆಗೆ ಸುಪ್ರೀಂಕೋರ್ಟ್ ನಿಷೇಧ ವಿಧಿಸಿದೆ.
ಸೀಸ, ಪಾದರಸ, ಲಿಥಿಯಂ, ಅರ್ಸೆನಿಕ್ ಮತ್ತು ಅಂಜನಕಲ್ಲು- ಈ ಐದು ಲೋಹಗಳನ್ನು ಪಟಾಕಿ ತಯಾರಿಕೆ ಸಂದರ್ಭ ಬಳಸಬಾರದು ಎಂದು ನ್ಯಾಯಮೂರ್ತಿ ಮದನ್ ಬಿ.ಲೋಕುರ್ ನೇತೃತ್ವದ ಸುಪ್ರೀಂಕೋರ್ಟ್ನ ವಿಭಾಗೀಯ ಪೀಠವೊಂದು ಆದೇಶಿಸಿದೆ.
ಪಟಾಕಿ ಸಿಡಿಸುವ ಸಂದರ್ಭ ಉಂಟಾಗುವ ವಾಯುಮಾಲಿನ್ಯದ ಮಾನದಂಡದ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅದುವರೆಗೆ ಪಟಾಕಿ ಉತ್ಪಾದಕರು ಐದು ಹಾನಿಕಾರಕ ಲೋಹಗಳನ್ನು ಬಳಸದಂತೆ ನಿಷೇಧಿಸಲಾಗುವುದು ಎಂದು ತಿಳಿಸಿದರು. ಈ ಆದೇಶದ ಪಾಲನೆಯ ಜವಾಬ್ದಾರಿ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ (ಪಿಎಎಸ್ಒ) ಸಂಸ್ಥೆಯದ್ದಾಗಿದೆ ಎಂದೂ ನ್ಯಾಯಪೀಠ ತಿಳಿಸಿದೆ.
Next Story