ವಂದೇ ಮಾತರಂ ಹಾಡದೇ ಇರುವುದು ತಪ್ಪಲ್ಲ: ರಾಮ್ದಾಸ್ ಅಠಾವಳೆ
ಥಾಣೆ, ಆ.1: ರಾಷ್ಟ್ರಗಿತೆ ವಂದೇ ಮಾತರಂ ಅನ್ನು ಒಂದು ವೇಳೆ ಕೆಲವರು ಹಾಡದೇ ಇರಬಹುದು. ಅದರಲ್ಲೇನೂ ತಪ್ಪಿಲ್ಲ ಎಂದು ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ ಹೇಳಿದ್ದಾರೆ.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರಾಗಿರುವ ಅಠಾವಳೆ, ಸಮುದಾಯಗಳ ನಡುವೆ ದ್ವೇಷ ಉಂಟು ಮಾಡಲು ರಾಷ್ಟ್ರಗೀತೆ ವಿವಾದ ಹುಟ್ಟು ಹಾಕಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಒಂದೇ ಮಾತರಂ ಹಾಡಬೇಕು. ಆದರೆ, ಹಾಡದೇ ಇದ್ದರೇ ಯಾವ ತಪ್ಪಾಗುತ್ತದೆ ? ಎಂದು ಅವರ ಪ್ರಶ್ನಿಸಿದರು.
ಥಾಣೆ ಸಮೀಪದ ಕಲ್ಯಾಣ್ನಲ್ಲಿ ಮಹಾರಾಷ್ಟ್ರ ಗ್ರಾಮೀಣ ಪತ್ರಕರ್ತರ ಸಂಘದ 11ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ವೇಳೆ ಯಾರಾದರೊಬ್ಬರು ಒಂದೇ ಮಾತರಂ ಹಾಡಿಲ್ಲ ಎಂದರೆ, ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ರಾಜ್ಯ ಸಚಿವ ರಾಮ್ದಾಸ್ ಅಠಾವಳೆ ಹೇಳಿದರು.
ಇತ್ತೀಚೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ತಮಿಳುನಾಡಿನ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಂದೇ ಮಾತರಂ ಅನ್ನು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಿತ್ತು.