50 ಮಂದಿಯ ತಂಡದಿಂದ ಗೋರಕ್ಷಕರಿಗೆ ಥಳಿತ
ಪುಣೆ, ಆ.6: ಗೋರಕ್ಷಕರ ಮೇಲೆ ಸುಮಾರು 50 ಮಂದಿಯ ತಂಡವೊಂದು ದಾಳಿ ನಡೆಸಿರುವ ಘಟನೆ ಅಹ್ಮದ್ ನಗರ್ ಜಿಲ್ಲೆಯ ಶ್ರೀಗೊಂಡಾ ಪೊಲೀಸ್ ಠಾಣೆಯ ಸಮೀಪ ನಡೆದಿದೆ.
ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ಟೆಂಪೋವೊಂದನ್ನು ಗೋರಕ್ಷಕರು ತಡೆದ ನಂತರ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ ಎಂದು ಅಹ್ಮದಾನಗರ್ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಟೆಂಪೋದ ಮಾಲಕ ವಾಹಿದ್ ಶೈಖ್ ಹಾಗೂ ಚಾಲಕ ರಾಜು ಫತ್ರುಭಾಯ್ ಶೈಖ್ ವಿರುದ್ಧ ಪ್ರಾಣಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
“ಟೆಂಪೋದಲ್ಲಿ ಗೋಸಾಗಾಟ ಮಾಡುತ್ತಿದ್ದ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ನಾವು ಈ ಬಗ್ಗೆ ಶ್ರೀಗೊಂಡಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೆವು. ಅಹ್ಮದಾಬಾದ್ ದೌಂಡ್ ರಸ್ತೆಯ ಹೋಟೆಲ್ ತಿರಂಗಾ ಸಮೀಪ ಟೆಂಪೋವನ್ನು ನಾವು ತಡೆದೆವು. ಗೋವುಗಳನ್ನು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು” ಎಂದು ಶಿವಶಂಕರ್ ರಾಜೇಂದ್ರ ಸ್ವಾಮಿ ಎಂಬಾತ ತಿಳಿಸಿದ್ದಾನೆ.
“ಆರು ಗಂಟೆಯ ಸುಮಾರಿಗೆ ನಾವು ಪೊಲೀಸ್ ಠಾಣೆಯಿಂದ ಹೊರಬಂದೆವು. ಆ ಸಂದರ್ಭ ಬಂದ ಸುಮಾರು 50 ಮಂದಿಯ ತಂಡ ನಮ್ಮ ಮೇಲೆ ದಾಳಿ ನಡೆಸಿತು. ನಮ್ಮಲ್ಲಿ ಹಲವು ಕಾರ್ಯಕರ್ತರು ಗಾಯಗೊಂಡರು” ಎಂದು ಹೇಳಿದ್ದಾನೆ.
ಈ ಬಗ್ಗೆ 30 ಮಂದಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.