1962ರ ಚೀನಾ ವಿರುದ್ಧ ಯುದ್ಧದಲ್ಲಿ ಭಾರತ ಗೆದ್ದಿತ್ತು!
ಮಧ್ಯಪ್ರದೇಶದ ಎಂಟನೆ ತರಗತಿ ಸಂಸ್ಕೃತ ಪಠ್ಯದಲ್ಲಿ ತಪ್ಪು ಉಲ್ಲೇಖ
ಭೋಪಾಲ್, ಆ.10: ಡೋಕ್ಲಂ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಏರ್ಪಟ್ಟಿರುವ ನಡುವೆಯೇ, ಮಧ್ಯಪ್ರದೇಶದ ವಿವಿಧ ಸಿಬಿಎಸ್ಸಿ ಮಾನ್ಯತೆ ಪಡೆದ ಶಾಲೆಗಳಲ್ಲಿ ಬೋಧಿಸುವ ಸಂಸ್ಕೃತ ಪಠ್ಯದಲ್ಲಿ '1962ರ ಭಾರತ- ಚೀನಾ ಯದ್ಧದಲ್ಲಿ ಭಾರತ ಗೆದ್ದಿದೆ' ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಇರುವ ಸಂಸ್ಕೃತ ವಿಷಯದ ಸುಕೃತಿಕ ಸಂಚಿಕೆ-3ರಲ್ಲಿ, "1962ರ ಯುದ್ಧದಲ್ಲಿ ಭಾರತ ಗೆದ್ದಿರುವುದು ಎಲ್ಲರಿಗೂ ತಿಳಿಯಬೇಕಾಗಿದೆ" ಎಂದು ಪ್ರಕಟಿಸಲಾಗಿದೆ. ಲಕ್ನೋ ಮೂಲದ ಕೃತಿ ಪ್ರಕಾಶನ ಪುಸ್ತಕವನ್ನು ಉಮೇಶ್ ಪ್ರಸಾದ್ ರಸ್ತೋಗಿ ಮತ್ತು ವ್ಯಾಕರಣ ತಜ್ಞ ಸೋಮದತ್ ಶುಕ್ಲ ಸೇರಿದಂತೆ ಐದು ಪ್ರೊಫೆಸರ್ಗಳು ಬರೆದಿದ್ದಾರೆ. ಇದೀಗ ಇಬ್ಬರೂ ಮೃತಪಟ್ಟಿದ್ದಾರೆ. ಇತರ ಮೂವರು ಲೇಖಕರು ಮಧು ಸಿಂಗ್, ಲಲಿತಾ ಸೆಂಗರ್ ಮತ್ತು ನಿಶಾ ಗುಪ್ತ.
ಈ ತಪ್ಪು ಮಾಹಿತಿ ’ಜವಾಹರಲಾಲ್ ನೆಹರೂ’ ಎಂಬ ಶೀರ್ಷಿಕೆಯ ಎಂಟನೇ ಅಧ್ಯಾಯದಲ್ಲಿದೆ. ಭಾರತದ ಮೇಲೆ ಚೀನಾ ದಾಳಿ ಮಾಡಿದ ಬಳಿಕ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹೇಗೆ ಭಾರತಕ್ಕೆ ಬಲ ಮತ್ತು ನೈತಿಕತೆ ಕ್ರೋಢೀಕರಿಸಿದರು ಎಂದು ವಿವರಿಸುತ್ತಾ, "ನೆಹರೂ ಪ್ರಧಾನಿಯಾಗಿದ್ದಾಗ ಚೀನಾ ಭಾರತದ ವಿರುದ್ಧ ಯುದ್ಧ ಸಾರಿತು. ನೆಹರೂ ಪ್ರಯತ್ನದಿಂದಾಗಿ ಭಾರತ ಚೀನಾವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು" ಎಂದು ಪುಸ್ತಕ ವಿವರಿಸಿದೆ.