ಉತ್ತರ ಪ್ರದೇಶ: ಹಾಡಹಗಲೇ ಬಾಲಕಿಯ ಕತ್ತು ಸೀಳಿ ಕೊಲೆಗೈದ ಬಿಜೆಪಿ ನಾಯಕನ ಪುತ್ರ
ಲಕ್ನೋ, ಆ.10: ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲೇ ಬಿಜೆಪಿ ನಾಯಕನ ಪುತ್ರ 17 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಟೆಲಿಗ್ರಾಫ್ ಇಂಡಿಯಾ ಡಾಟ್ ಕಾಮ್ (telegraphindia.com) ವರದಿ ಮಾಡಿದೆ.
ಆರೋಪಿಯನ್ನು ಬಿಜೆಪಿ ಮುಖಂಡ ಹಾಗೂ ಸ್ಥಳೀಯ ಪಂಚಾಯತ್ ಮುಖಂಡ ಕೃಪಾಶಂಕರ್ ತಿವಾರಿಯ ಪುತ್ರ ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ. ಬಾಲಕಿ ರಾಗಿಣಿ ದುಬೆ ತನ್ನ ಸಹೋದರಿಯೊಂದಿಗೆ ಶಾಲೆಗೆ ತೆರಳುತ್ತಿದ್ದ ಸಂದರ್ಭ ಆಕೆಯನ್ನು ಅಡ್ಡಗಟ್ಟಿದ ತಿವಾರಿ ಇರಿದು ಕೊಂದಿದ್ದಾನೆ ಎನ್ನಲಾಗಿದೆ.
ತನ್ನನ್ನು ವಿವಾಹವಾಗುವಂತೆ ತಿವಾರಿ ಬಾಲಕಿಯನ್ನು ಒತ್ತಾಯಿಸುತ್ತಿದ್ದು, ಇದನ್ನು ಆಕೆ ನಿರಾಕರಿಸಿದ್ದಳು. ತಾನು ಶಿಕ್ಷಣ ಮುಗಿಸಿ ವೈದ್ಯೆಯಾಗಬೇಕು ಎನ್ನುವುದು ರಾಗಿಣಿಯ ಕನಸಾಗಿತ್ತು. ಸುಮಾರು 4 ತಿಂಗಳುಗಳಿಂದ ತಿವಾರಿ ಆಕೆಗೆ ಕಿರುಕುಳ ನೀಡುತ್ತಿದ್ದ. ರಾಗಿಣಿ ತನ್ನ ಸಹೋದರಿ ಸಿಯಾ ಜೊತೆಗೆ ಸೈಕಲ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಸಂದರ್ಭ ಸ್ನೇಹಿತನೊಂದಿಗೆ ಆಗಮಿಸಿದ ಪ್ರಿನ್ಸ್ ತಿವಾರಿ ಬೈಕ್ ನಿಂದ ಸೈಕಲ್ ಗೆ ಢಿಕ್ಕಿ ಹೊಡೆದಿದ್ದ.
“ನಾವು ನೆಲಕ್ಕೆ ಬಿದ್ದೆವು. ಪ್ರಿನ್ಸ್ ರಾಗಿಣಿಯನ್ನು ರಸ್ತೆಯ ಮಧ್ಯಕ್ಕೆ ಎಳೆದು, ಆಕೆಯ ಕತ್ತನ್ನು ಚಾಕುವಿನಿಂದ ಸೀಳಿದ. ಆ ಸಂದರ್ಭ ಸುಮಾರು 50 ಮಂದಿ ನೆರೆದಿದ್ದರು. ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ” ಎಂದು ಸಿಯಾ ಹೇಳಿದ್ದಾಳೆ.
ಪ್ರಕರಣದ ಬಗ್ಗೆ ಬಾಲಕಿಯ ತಂದೆ ಜಿತೇಂದ್ರ ದುಬೆ ನೀಡಿದ ದೂರಿನಂತೆ ಪ್ರಿನ್ಸ್, ಕೃಪಾಶಂಕರ್, ಸೋನು, ನೀರಜ್ ತಿವಾರಿ ಹಾಗೂ ರಾಜು ಎಂಬವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.