ನಟ ದಿಲೀಪ್ರಿಂದ ಪುನಃ ಜಾಮೀನು ಅರ್ಜಿ
ಕೊಚ್ಚಿ,ಆ.10: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಗುರುವಾರ ಹೈಕೋರ್ಟಿನಲ್ಲಿ ಪುನಃ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ವಾರವೇ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ ಎಂದು ದಿಲೀಪ್ರ ವಕೀಲರಾದ ಬಿ.ರಾಮನ್ ಪಿಳ್ಳೆ ಹೇಳಿದರು. ದಿಲೀಪ್ ಬಂಧನಕ್ಕೊಳಗಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಪುನಃ ಜಾಮೀನಿಗಾಗಿ ಹೈಕೋರ್ಟಿನ ಮೊರೆ ಹೋಗಲಿದ್ದಾರೆ. ಈ ಬಾರಿ ಜಾಮೀನು ಸಿಗುವ ವಿಶ್ವಾಸವನ್ನು ದಿಲೀಪ್ರ ವಕೀಲರು ವ್ಯಕ್ತಪಡಿಸಿದ್ದಾರೆ.
ದಿಲೀಪ್ರ ಮ್ಯಾನೇಜರ್ ಅಪ್ಪುಣ್ಣಿ ಭೂಗತನಾಗಿದ್ದಾರೆ, ಪ್ರಧಾನ ಪುರಾವೆಯಾದ ಮೊಬೈಲ್ ಫೋನ್ ನಾಶಮಾಡಬಹುದು ಎನ್ನುವ ವಿಷಯಗಳನ್ನು ಪ್ರಸ್ತಾವಿಸಿದ್ದರಿಂದ ಈ ಹಿಂದೆ ಹೈಕೋರ್ಟು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಅಪ್ಪುಣ್ಣಿ ಪೊಲೀಸರ ವಿಚಾರರಣೆಗೆ ಹಾಜರಾಗಿದ್ದಾರೆ. ಇನ್ನೊಂದೆಡೆ ಮೊಬೈಲ್ ಫೋನ್ ನಾಶಪಡಿಸಲಾಗಿದೆ ಎಂದು ಸಾಕ್ಷ್ಯ ಲಭಿಸಿರುವುದರಿಂದ ಈ ವಾದಗಳು ಪ್ರಾಮುಖ್ಯತೆ ಕಳೆದುಕೊಂಡಿದೆ.
ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಪೊಲೀಸರುಇದನ್ನು ವಿರೋಧಿಸಲಿದ್ದಾರೆ. ದಿಲೀಪ್ ಉನ್ನತ ಮಟ್ಟದಲ್ಲಿ ಪ್ರಭಾವ ಬೀರಬಹುದು ಎನ್ನುವ ವಾದವನ್ನು ಪೊಲೀಸರು ಕೋರ್ಟಿನಲ್ಲಿ ಎತ್ತಿಹಿಡಿಯಲಿದ್ದಾರೆ. ಮತ್ತು ಶೀಘ್ರದಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿಯನ್ನು ಸಮರ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.