ಕಾಂಗ್ರೆಸ್ನಿಂದ ಉಚ್ಚಾಟಿತ ಏಳು ಶಾಸಕರ ರಾಜೀನಾಮೆ, ಬಿಜೆಪಿಗೆ ಸೇರಲು ಸಜ್ಜು
ಅಹ್ಮದಾಬಾದ್,ಆ.11: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಕಾಂಗ್ರೆಸ್ನಿಂದ ಉಚ್ಚಾಟಿತರಾಗಿರುವ ಗುಜರಾತ್ನ ಏಳು ಶಾಸಕರು ಗುರುವಾರ ರಾತ್ರಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ಗಳನ್ನು ಸಲ್ಲಿಸಿದ್ದಾರೆ ಎಂದು ವಿಧಾನಸಭಾ ಸ್ಪೀಕರ್ ರಮಣಲಾಲ ವೋರಾ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆ.8ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಮಾಜಿ ಪ್ರತಿಪಕ್ಷ ನಾಯಕ ಶಂಕರಸಿಂಹ್ ವೇಲಾ ಮತ್ತು ಇತರ ಏಳು ಶಾಸಕರನ್ನು ಕಾಂಗ್ರೆಸ್ ಆ.9ರಂದು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿತ್ತು. ಏಳು ಶಾಸಕರಲ್ಲಿ ಶಂಕರಸಿಂಹ್ ಪುತ್ರ ಮಹೇಂದ್ರಸಿಂಹ್ ವೇಲಾ ಅವರೂ ಸೇರಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಔಪಚಾರಿಕತೆಯನ್ನು ನಾವು ಪೂರ್ಣಗೊಳಿಸಿ ದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಮಹೇಂದ್ರಸಿಂಹ್, ಗುರುವಾರ ರಾತ್ರಿ ರಾಜೀನಾಮೆ ನೀಡಿರುವ ಏಳು ಶಾಸಕರು ಮತ್ತು ಈ ಹಿಂದೆ ರಾಜೀನಾಮೆ ನೀಡಿದ್ದ ಆರು ಶಾಸಕರ ಪೈಕಿ ಮೂವರು ಶೀಘ್ರವೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದರು. ಆದರೆ ತನ್ನ ತಂದೆ ಶಂಕರಸಿಂಹ್ ವೇಲಾ ಬಿಜೆಪಿಗೆ ಸೇರುವುದಿಲ್ಲ ಎಂದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ 57 ಸದಸ್ಯರನ್ನು ಹೊಂದಿದ್ದು, ಈ ಪೈಕಿ ಆರು ಜನರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿದ್ದ ಬಲವಂತಸಿಂಹ್ ರಾಜಪೂತ್ ಸೇರಿದಂತೆ ಈ ಪೈಕಿ ಮೂವರು ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರೆ, ಇತರ ಮೂವರು ಬಿಜೆಪಿಗೆ ಸೇರುವ ಬಗ್ಗೆ ಆಗ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ.