ನಿರ್ಧಾರ ತೆಗೆದುಕೊಳ್ಳಲು ಶರದ್ ಯಾದವ್ ಮುಕ್ತ: ನಿತೀಶ್
ಕುಮಾರ್ ಹೊಸದಿಲ್ಲಿ, ಆ. 11: ಬಿಜೆಪಿಯೊಂದಿಗೆ ಮೈತ್ರಿಗೆ ಜೆಡಿ (ಯು) ಸಂಪೂರ್ಣ ಒಪ್ಪಿಗೆ ಸೂಚಿಸಿತ್ತು. ಆದುದರಿಂದ ಶರದ್ ಯಾದವ್ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತ ಎಂದು ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿ (ಯು) ಮುಖ್ಯಸ್ಥ ನಿತೀಶ್ ಕುಮಾರ್ ಹೇಳಿದ್ದಾರೆ.
ಇದರೊಂದಿಗೆ ಶರದ್ ಯಾದವ್ ಅವರೊಂದಿಗೆ ರಾಜಿ ಮಾತುಕತೆಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದ ಸೂಚನೆಯನ್ನು ನಿತೀಶ್ ಕುಮಾರ್ ನೀಡಿದ್ದಾರೆ.
ಅವರು (ಶರದ್ ಯಾದವ್)ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಕ್ತ. ಆದರೆ, ಪಕ್ಷಕ್ಕೆ ಸಂಬಂಧಿಸಿ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ನನ್ನೊಬ್ಬನದ್ದಲ್ಲ. ಇದು ಪಕ್ಷದ ನಿರ್ಧಾರ. ಅವರಿಗೆ ಭಿನ್ನಾಭಿಪ್ರಾಯವಿದ್ದರೆ, ನಿರ್ಧಾರ ತೆಗೆದುಕೊಳ್ಳಲು ಅವರು ಮುಕ್ತ ಎಂದು ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ತಿಳಿಸಿದರು.
ಆರ್ಜೆಡಿ ಹಾಗೂ ಕಾಂಗ್ರೆಸ್ನೊಂದಿಗೆ ಮೈತ್ರಿ ಮುರಿದುಕೊಂಡು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಅವರು ಹೊಸದಿಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಶರದ್ ಯಾದವ್ ಅವರ ಬಹಿರಂಗ ಬಂಡಾಯಕ್ಕೆ ನಿತೀಶ್ ಕುಮಾರ್ ಅವರು ನೀಡಿದ ನೇರ ಪ್ರತಿಕ್ರಿಯೆ ಇದಾಗಿದೆ.