ಭಾರತೀಯ ವೈಮಾನಿಕ ಪಡೆಯ ಮಾನವ ರಹಿತ ವಿಮಾನ ಪತನ
ಜಮ್ಮು, ಆ. 11: ಭಾರತೀಯ ವೈಮಾನಿಕ ಪಡೆಯ ಮಾನವ ರಹಿತ ವಿಮಾನ ಇಂದು ಬೆಳಗ್ಗೆ ರಾಡರ್ ಸಂಪರ್ಕ ಕಳೆದುಕೊಂಡ ಬಳಿಕ ಜಮ್ಮು ಹಾಗೂ ಕಾಶ್ಮೀರದ ಗಡಿ ಜಿಲ್ಲೆಯ ಕಥುವಾದಲ್ಲಿ ಪತನಗೊಂಡಿದೆ.
ಜಿಲ್ಲೆಯ ಛಾಡ್ವಾಲ್ ವಲಯದ ಲಾಡೋಲ್ ಗ್ರಾಮದ ಸಮೀಪ ಮಾನವ ರಹಿತ ವೈಮಾನಿಕ ವಾಹನ (ಯುಎವಿ) ಪತನಗೊಂಡಿತು.
ಕಥುವಾ ವಲಯದಲ್ಲಿ ಯುಎವಿ ಸಂಪರ್ಕ ಕಡಿದುಕೊಂಡಿದೆ ಎಂದು ಭಾರತೀಯ ವೈಮಾನಿಕ ಪಡೆಯ ಅಧಿಕಾರಿಗಳಿಂದ ನಾವು ಮಾಹಿತಿ ಪಡೆದುಕೊಂಡೆವು. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಿದೆವು ಎಂದು ಕಥುವಾದ ಹಿರಿಯ ಪೊಲೀಸ್ ಅಧೀಕ್ಷಕ ಮುಹಮ್ಮದ್ ಸುಲೈಮಾನ್ ಚೌಧುರಿ ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ನಡೆಸಿದಾಗ ಜಿಲ್ಲೆಯ ರಾಜ್ಬಾಘ್ ತೆಹ್ಸಿಲ್ನ ಛಾಡ್ವಾಲ್ ವಲಯದ ಲಾಡೋಲ್ ಗ್ರಾಮದ ಸಮೀಪ ಯುಎವಿ ಅವಶೇಷ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವೈಮಾನಿಕ ಪಡೆ ಸಿಬ್ಬಂದಿ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪತನದ ಹಿಂದಿನ ಕಾರಣಗಳ ಬಗ್ಗೆ ಭಾರತೀಯ ವೈಮಾನಿಕ ಪಡೆಯ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸಲು ವೈಮಾನಿಕ ಪಡೆ ಆದೇಶ ನೀಡಿದೆ.