ಸೇನಾ ಸಚಿವನ ರಾಜೀನಾಮೆ ಕೊಡುಗೆ ತಿರಸ್ಕರಿಸಿದ ಮುಖ್ಯಮಂತ್ರಿ ಫಡ್ನವೀಸ್
ಮುಂಬೈ,ಆ.12: ಪ್ರತಿಪಕ್ಷಗಳಿಂದ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರದ ಕೈಗಾರಿಕಾ ಸಚಿವ, ಶಿವಸೇನೆಯ ಸುಭಾಷ್ ದೇಸಾಯಿ ಅವರು ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುವ ಕೊಡುಗೆಯನ್ನು ಶನಿವಾರ ಮುಂದಿರಿಸಿದ್ದರಾದರೂ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅದನ್ನು ತಳ್ಳಿಹಾಕಿದ್ದಾರೆ.
ನಾಸಿಕ್ನಲ್ಲಿ ಸರಕಾರಿ ಸ್ವಾಮ್ಯದ ಎಂಐಡಿಸಿಯು ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಡಿನೋಟಿಫೈ ಮಾಡುವಾಗ ದೇಸಾಯಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ದೇಸಾಯಿ ವಿರುದ್ಧದ ಆರೋಪಗಳ ಕುರಿತಂತೆ ಫಡ್ನವೀಸ್ ಅವರು, ಈ ಪ್ರಕರಣವನ್ನು ಪರಿಶೀಲಿಸುವಂತೆ ಸರಕಾರವು ಲೋಕಾಯುಕ್ತವನ್ನು ಕೋರಲಿದೆ. ಅದಾಗದಿದ್ದರೆ ಸ್ವತಂತ್ರ ತನಿಖೆಯೊಂದನ್ನು ನಡೆಸಲಾಗುವುದು ಎಂದು ಶುಕ್ರವಾರ ತಿಳಿಸಿದ್ದರು. ಇದೇ ವೇಳೆ ಇಲ್ಲಿ ಕೊಳಗೇರಿ ಪುನರ್ ಅಭಿವೃದ್ಧಿ ಯೋಜನೆಯಲ್ಲಿ ಅಕ್ರಮಗಳ ಆರೋಪ ಎದುರಿಸುತ್ತಿರುವ ವಸತಿ ಸಚಿವ, ಬಿಜೆಪಿಯ ಪ್ರಕಾಶ ದೇಶಮುಖ ಅವರ ವಿರುದ್ಧ ಲೋಕಾಯುಕ್ತರಿಂದ ತನಿಖೆ ನಡೆಸುವುದಾಗಿ ಅವರು ಪ್ರಕಟಿಸಿದ್ದರು.