ಗೋರಖ್ಪುರ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಅಮಾನತು
ಗೋರಖ್ಪುರ, ಆ.12: ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ತಕ್ಷಣ ಜಾರಿಗೆ ಬರುವಂತೆ ಉತ್ತರಪ್ರದೇಶದ ಆರೋಗ್ಯ ಸಚಿವ ಸಿದ್ದಾರ್ಥನಾಥ್ ಸಿಂಗ್ ಶನಿವಾರ ಅಮಾನತುಗೊಳಿಸಿದ್ದಾರೆ.
ಆಸ್ಪತ್ರೆಯಲ್ಲಿ 63 ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಡಾ. ರಾಜೀವ್ ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿದೆ.
ನಿರ್ಲಕ್ಷತೆಯ ಕಾರಣಕ್ಕಾಗಿ ಬಿಆರ್ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಗೋರಖ್ಪುರದ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವರದಿ ಕೇಳಿದ್ದಾರೆ. ಅವರ ನಿರ್ದೇಶನದಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಸಹಾಯಕ ಸಚಿವ ಅನುಪ್ರಿಯಾ ಪಟೇಲ್ ಕೂಡ ಘಟನೆ ಬಗ್ಗೆ ವರದಿ ಕೇಳಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಕಂಪೆನಿ ಆಮ್ಲಜನಕ ಪೂರೈಸಿಲ್ಲ: ಆಸ್ಪತ್ರೆ ಶುಕ್ರವಾರ ಸಂಜೆ ಆಮ್ಲಜನಕ ಪೂರೈಕೆ ಕಂಪೆನಿ 300 ಹೆಚ್ಚುವರಿ ಆ್ಲಮಜನಕ ಸಿಲಿಂಡರ್ ಪೂರೈಸಿತ್ತು. ಅನಂತರ ಇನ್ನಷ್ಟು ಆಮ್ಲಜನಕ ಪೂರೈಸುವಂತೆ ಮನವಿ ಮಾಡಲಾಗಿತ್ತು. ಆದರೆ, ಹಣ ಪಾವತಿ ಬಾಕಿ ಇದ್ದುದರಿಂದ ಕಂಪೆನಿ ಆಮ್ಲಜನಕ ಸಿಲಿಂಡರ್ ಪೂರೈಸಿಲ್ಲ ಎಂದು ಬಿಆರ್ಡಿ ಆಸ್ಪತ್ರೆ ವರದಿ ಹೇಳಿದೆ.