ಸ್ವಕ್ಷೇತ್ರದ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಘಟಕ ಸ್ಥಾಪನೆಗೆ ಐದು ಕೋ.ರೂ.: ವರುಣ್ ಭರವಸೆ
ಹೊಸದಿಲ್ಲಿ,ಆ.14: ಉತ್ತರ ಪ್ರದೇಶದ ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 79 ಮಕ್ಕಳು ಸಾವನ್ನಪ್ಪಿ ರುವ ದುರಂತ ಘಟನೆಯಿಂದ ವಿಚಲಿತರಾಗಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಅವರು, ತನ್ನ ಸ್ವಕ್ಷೇತ್ರ ಸುಲ್ತಾನ್ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಘಟಕದ ಸ್ಥಾಪನೆಗಾಗಿ ತನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಐದು ಕೋಟಿ ರೂ.ಗಳನ್ನು ನೀಡುವುದಾಗಿ ಸೋಮವಾರ ಭರವಸೆ ನೀಡಿದ್ದಾರೆ. ಆಸ್ಪತ್ರೆಗಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಅವುಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಐದು ಕೋ.ರೂ.ಗಳ ದೇಣಿಗೆಗಳನ್ನು ಖುದ್ದು ಸಂಗ್ರಹಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಗೋರಖ್ಪುರ ದುರಂತವು ತನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಯೋಜನೆ ಕುರಿತು ಬೆಳಿಗ್ಗೆ ಸುಲ್ತಾನಪುರ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು, ಮುಖ್ಯವೈದ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿಯೂ ಗಾಂಧಿ ಹೇಳಿದ್ದಾರೆ.