ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ: ತನಿಖಾ ಸಮಿತಿ ವರದಿಗೆ ವಿರೋಧ ಪಕ್ಷ, ಮಾನವ ಹಕ್ಕು ಕಾರ್ಯಕರ್ತರಿಂದ ಟೀಕೆ
ಹೊಸದಿಲ್ಲಿ, ಆ. 17: ವಿಶ್ವವಿದ್ಯಾನಿಲಯ ತೆಗೆದುಕೊಂಡ ಕ್ರಮ ದಲಿತ ವಿದ್ಯಾರ್ಥಿ ನಾಯಕ ರೋಹಿತ್ ವೇಮುಲ ಆತ್ಮಹತ್ಯೆಗೆ ಕಾರಣವಲ್ಲ ಎಂಬ ತನಿಖಾ ಸಮಿತಿ ವರದಿಯನ್ನು ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಟೀಕಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರೂಪಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಕೆ. ರೂಪಾನ್ವಾಲ್ ಉಸ್ತುವಾರಿಯ ಏಕ ಸದಸ್ಯ ನ್ಯಾಯಾಂಗ ಆಯೋಗದ ವರದಿ, ವೇಮುಲಾ ವೈಯುಕ್ತಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು. ಹಲವು ಕಾರಣಕ್ಕಾಗಿ ಅವರು ಅತೃಪ್ತಿ ಹೊಂದಿದ್ದರು ಎಂದು ಹೇಳಿದೆ. ಕಳೆದ ವರ್ಷ ಮಾನವ ಸಂಪನ್ಮೂಲ ವಿಭಾಗಕ್ಕೆ ಸಲ್ಲಿಸಿದ ತನಿಖಾ ಆಯೋಗದ ವರದಿ ಕೂಡ, ವೇಮುಲಾ ದಲಿತನಲ್ಲ ಎಂದು ಹೇಳಿತ್ತು. ಹಾಗೂ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಹಾಗೂ ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಈ ವರದಿ ಕೇಂದ್ರದಲ್ಲಿರುವ ಸರಕಾರದ ನಿಲುವಾಗಿದೆ ಎಂದು ಶೈಕ್ಷಣಿಕ ತಜ್ಞ ಹಾಗೂ ಮಾನವ ಹಕ್ಕು ಕಾರ್ಯಕರ್ತ ಕಾಂಚಾ ಐಲಯ್ಯ ಆರೋಪಿಸಿದ್ದಾರೆ.
ಸತ್ಯ ಬೆಳಕಿಗೆ ಬರಲು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ನಾನು ಆಗ್ರಹಿಸಿದ್ದೆ. ಕೇಂದ್ರ ಸರಕಾರದ ನಿಲುವನ್ನೇ ನಿವೃತ್ತ ನ್ಯಾಯಾಧೀಶರು ತಮ್ಮ ವರದಿಯಲ್ಲಿ ಹೇಳಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ.
ಈ ವರದಿ ಅವಮಾನಕರ ಎಂದು ಕಾಂಗ್ರೆಸ್ನ ರಾಜೀವ್ ಗೌಡ ಹೇಳಿದ್ದಾರೆ.