ಆರ್ಜೆಡಿ ರ್ಯಾಲಿಯಲ್ಲಿ ಭಾಗವಹಿಸಿದರೆ ಕ್ರಮ: ಶರದ್ ಯಾದವ್ಗೆ ಜೆಡಿಯು ಎಚ್ಚರಿಕೆ
ಪಾಟ್ನಾ, ಆ. 20: ಆಗಸ್ಟ್ 27ರಂದು ನಡೆಯುವ ಆರ್ಜೆಡಿ ರ್ಯಾಲಿಯಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವ ಸೂಚನೆಯನ್ನು ಶರದ್ ಯಾದವ್ ಗೆ ಜೆಡಿಯು ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ.
ಹಿರಿತನ ಹಾಗೂ ಪಕ್ಷದೊಂದಿಗಿನ ಬಹುಕಾಲದ ಸಂಪರ್ಕದ ಕಾರಣಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಶರದ್ ಯಾದವ್ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಆಗಸ್ಟ್ 27ರಂದು ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ರ್ಯಾಲಿಯಲ್ಲಿ ಪಾಲ್ಗೊಂಡರೆ, ಅನಂತರ ನಾವು ಲಕ್ಷ್ಮಣ ರೇಖೆ ಮೀರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ತನ್ನ ಸ್ವಂತ ಅಭಿಪ್ರಾಯದಂತೆ ಯಾದವ್ ಅವರು ಪಕ್ಷ ತ್ಯಜಿಸಿದ್ದಾರೆ. ಅವರು ಭಾವನಾತ್ಮಕ ಅಥವಾ ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂದು ತ್ಯಾಗಿ ಹೇಳಿದರು.
ಮುಖ್ಯಮಂತ್ರಿಯ ಇಲ್ಲಿನ ಅಧಿಕೃತ ನಿವಾಸದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಬಲಿಗರು ಹಾಗೂ ಆರ್ಜೆಡಿಯ ಸದಸ್ಯರೊಂದಿಗೆ ಯಾದವ್ ಅವರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.