ಚುನಾವಣಾ ಆಯೋಗ, ಅಹ್ಮದ್ ಪಟೇಲ್ಗೆ ಗುಜರಾತ್ ಹೈಕೋರ್ಟ್ ನೋಟಿಸ್
ರಾಜ್ಯಸಭೆ ಚುನಾವಣೆ
ಅಹ್ಮದಾಬಾದ್, ಆ. 21: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಇಬ್ಬರು ಬಂಡಾಯ ಶಾಸಕರ ಮತವನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಬಲ್ವಂತ್ಸಿನ್ಹ ರಜಪೂತ್ ಸಲ್ಲಿಸಿದ ದಾವೆ ಹಿನ್ನೆಲೆಯಲ್ಲಿ ಗುಜರಾತ್ ಉಚ್ಚ ನ್ಯಾಯಾಲಯ ಚುನಾವಣಾ ಆಯೋಗ ಹಾಗೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ಗೆ ನೋಟಿಸು ಜಾರಿ ಮಾಡಿದೆ.
ಚುನಾವಣಾ ಆಯೋಗ, ಪಟೇಲ್ ಹಾಗೂ ಇತರ ಇಬ್ಬರು ಅಭ್ಯರ್ಥಿಗಳಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ನ್ಯಾಯಮೂರ್ತಿ ಬೇಲಾ ತ್ರಿವೇದಿ ನೋಟಿಸು ಜಾರಿ ಮಾಡಿದ್ದಾರೆ.
ಈ ನೋಟಿಸಿಗೆ ಸೆಪ್ಟಂಬರ್ 21ರಂದು ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಕಾಂಗ್ರೆಸ್ನ ಇಬ್ಬರು ಬಂಡಾಯ ಅಭ್ಯರ್ಥಿಗಳ ಮತವನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ರಾಜ್ಯಸಭೆ ಚುನಾವಣೆಗೆ ಗುಜರಾತ್ನಿಂದ ಸ್ಪರ್ಧಿಸಿ ಸೋತ ಬಿಜೆಪಿ ಅಭ್ಯರ್ಥಿ ರಜಪೂತ್ ಹೈಕೋರ್ಟ್ನ ಮೆಟ್ಟಿಲೇರಿದ್ದರು.
ಆಗಸ್ಟ್ 8ರಂದು ಚುನಾವಣೆ ನಡೆಯಲಿದ್ದ ಹಿನ್ನೆಲೆಯಲ್ಲಿ ರಜಪೂತ್ ಕಾಂಗ್ರೆಸ್ನ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿಯ ಮೂರನೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.