ತ್ರಿವಳಿ ತಲಾಕ್ ಅಸಂವಿಧಾನಿಕ : ಸುಪ್ರೀಂ ಕೋರ್ಟ್
3 ನ್ಯಾಯಾಧೀಶರ ವಿರೋಧ, ಇಬ್ಬರು ಪರ
ಹೊಸದಿಲ್ಲಿ, ಆ.22: ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ.
ತ್ರಿವಳಿ ತಲಾಕ್ ನ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿ ಗಳ ಸಂವಿಧಾನಿಕ ನ್ಯಾಯಪೀಠವು ಬಹುಮತದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಉದಯ್ ಲಲಿತ್, ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ “ ತ್ರಿವಳಿ ತಲಾಕ್ ಇಸ್ಲಾಂ ಮತ್ತು ಸಂವಿಧಾನಬಾಹಿರ. ಇದಕ್ಕೆ ಸಾಂವಿಧಾನಿಕ ರಕ್ಷಣೆ ನೀಡಲು ಸಾಧ್ಯವಿಲ್ಲ.ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ , ನ್ಯಾ. ಕುರಿಯನ್ ಜೋಸೆಫ್ , ನ್ಯಾ. ಆರ್.ಎಫ್. ನಾರಿಮನ್ , ನ್ಯಾ. ಉದಯ್ ಉಮೇಶ್ ಲಲಿತ್ , ನ್ಯಾ.ಅಬ್ದುಲ್ ನಝೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯ ಪೀಠವು ತ್ರಿವಳಿ ತಲಾಕ್ ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ಆರು ದಿನಗಳ ಕಾಲ ವಿಚಾರಣೆ ನಡೆಸಿ ಮೇ 18ರಂದು ತೀರ್ಪು ಕಾಯ್ದಿರಿಸಿತ್ತು.
ಸಾಂವಿಧಾನಿಕ ಪೀಠದ ಪಂಚ ಸದಸ್ಯರ ಪೈಕಿ ಇಬ್ಬರು ತ್ರಿವಳಿ ತಲಾಕ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾ.ಅಬ್ದುಲ್ ನಝೀರ್ ತ್ರಿವಳಿ ತಲಾಕ್ ಪರ ಧ್ವನಿಯೆತ್ತಿದ್ದರು. ಆದರೆ ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯುಕ್ತಿಕ ಕಾನೂನಿಗೆ ಸಂವಿಧಾನ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಂತೆ ಬಹುಮತ (3-2) ಆಧಾರದ ಮೇಲೆ ತ್ರಿವಳಿ ತಲಾಕ್ ಬಗ್ಗೆ ತೀರ್ಪು ಹೊರಬಂದಿದೆ. ಇದರೊಂದಿಗೆ ತ್ರಿವಳಿ ತಲಾಕ್ ಗೆ ಸಂವಿಧಾನಿಕ ಮಾನ್ಯತೆ ಇಲ್ಲದಾಗಿದೆ.
ಆರು ತಿಂಗಳೊಳಗೆ ಈ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಸರಕಾರ ಸೂಕ್ತ ಕಾನೂನು ರಚಿಸಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಸಲಹೆ ನೀಡಿದ್ದಾರೆ