ಲಾಲು ಪ್ರಸಾದ್ ಯಾದವ್ರ ರ್ಯಾಲಿಯಲ್ಲಿ ಭಾಗವಹಿಸಲು ನಿರಾಕರಿಸಿದ ಮಾಯಾವತಿ
ಲಕ್ನೊ,ಆ.22: ಆರ್.ಜೆ.ಡಿ. ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಆಗಸ್ಟ್ 27ರಂದು ನಡೆಯುವ ಬಿಜೆಪಿ ತೊಲಗಿಸಿ-ದೇಶ ಉಳಿಸಿ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮಾಯಾವತಿ ನಿರಾಕರಿಸಿದ್ದಾರೆ.
ಮಾಯಾವತಿ ಈ ನಿರ್ಧಾರದಿಂದ ಲಾಲುಪ್ರಸಾದ್ರಿಗೆ ಹಿನ್ನಡೆಯಾಗಿದೆ. ಒಂದು ಕಡೆ ಬಿಜೆಪಿಯ ವಿರುದ್ಧ ವಿಪಕ್ಷಗಳ ಒಗ್ಗೂಡುವಿಕೆಯ ಯತ್ನ ನಡೆಯುತ್ತಿದೆ. ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆಗಸ್ಟ್ 27ರಂದು ಪಾಟ್ನದ ಗಾಂಧಿ ಮೈದಾನದಲ್ಲಿ ಬಿಜೆಪಿ ತೊಲಗಿಸಿ, ದೇಶವನ್ನು ರಕ್ಷಿಸಿ ರ್ಯಾಲಿಯನ್ನು ಆಯೋಜಿಸುತ್ತಿದ್ದಾರೆ. ಈ ರ್ಯಾಲಿಯಲ್ಲಿ ಭಾಗವಹಿಸುವಂತೆ ಎನ್ಡಿಎಯೇತರ ಪಕ್ಷಗಳ ಮುಖ್ಯ ನಾಯಕರಿಗೆ ಆಮಂತ್ರಣ ನೀಡಲಾಗಿದೆ.
ಮೊದಲ ಬಾರಿ ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜ ಪಕ್ಷ ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ ಎಂದು ಲಾಲುರಲ್ಲಿ ನಿರೀಕ್ಷೆಯಿತ್ತು. ದೇಶದ ಈಗಿನ ರಾಜಕೀಯದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಿರಂತರ ಸಾಗುತ್ತಿದೆ.
ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಇಂದು ಲಕ್ನೊದಲ್ಲಿ ಹೇಳಿಕೆ ನೀಡಿ "ತನಗೆ ಯಾವುದೇ ಅಧಿಕೃತ ಟ್ವಿಟರ್ ಖಾತೆ ಇಲ್ಲ" ಎಂದು ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಕಂಡು ಬಂದ ಪೋಸ್ಟರ್ನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸುಳ್ಳುಪ್ರಚಾರಗಳನ್ನು ಬಿಎಸ್ಪಿ ಖಂಡಿಸುತ್ತದೆ ಹಾಗೂ ಆಗಸ್ಟ್ 27ರ ರ್ಯಾಲಿಯ ಕುರಿತು ಕೆಲವು ಪತ್ರಿಕೆಗಳಲ್ಲಿ ಬಂದ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಲಾಲುರ ರ್ಯಾಲಿಯಲ್ಲಿ ಭಾಗವಹಿಸಲಿರುವ ಅಖಿಲೇಶ್
ಸಮಾಜವಾದಿ ಪಾರ್ಟಿಯ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಗಸ್ಟ್ 27ರಂದು ರವಿವಾರ ಪಾಟ್ನದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಲಾಲು ಪ್ರಸಾದ್ ಯಾದವ್ರು ಆಯೋಜಿಸುವ ಬಿಜೆಪಿ ತೊಲಗಿಸಿ, ದೇಶ ಉಳಿಸಿ ರ್ಯಾಲಿಯಲ್ಲಿ ಜನತೆಯನ್ನು ಉದ್ದೇಶಿಸಿ ಅವರು ಮಾತಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.