ದಾಭೋಲ್ಕರ್,ಪನ್ಸಾರೆ ಹತ್ಯೆಗಳು ಸುಯೋಜಿತ ಮತ್ತು ಪರಸ್ಪರ ನಂಟು ಹೊಂದಿದ್ದವು: ಹೈಕೋರ್ಟ್
ಮುಂಬೈ,ಆ.23: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆಗಳು ಸುಯೋಜಿತವಾಗಿದ್ದವು ಮತ್ತು ಈ ಹತ್ಯೆಗಳ ರೂವಾರಿಗಳು ಸಾಂಸ್ಥಿಕ ಬೆಂಬಲವನ್ನು ಹೊಂದಿದ್ದರು ಎಂದು ಬುಧವಾರ ಹೇಳಿರುವ ಬಾಂಬೆ ಉಚ್ಚ ನ್ಯಾಯಾಲಯವು, ದುಷ್ಕರ್ಮಿಗಳನ್ನು ಬಂಧಿಸಲು ತಮ್ಮ ಈಗಿನ ತನಿಖಾ ವ್ಯಾಪ್ತಿಯನ್ನು ವಿಸ್ತರಿಸುವಂತೆ ತನಿಖಾ ತಂಡಗಳಿಗೆ ಸೂಚಿಸಿದೆ.
ಈ ಎರಡೂ ಹತ್ಯೆಗಳ ನಡುವೆ ‘ಸ್ಪಷ್ಟ ನಂಟು’ ಇದೆ ಎಂದೂ ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ವಿಭಾ ಕಂಕಣವಾಡಿ ಅವರ ಪೀಠವು ಹೇಳಿತು.
ಪನ್ಸಾರೆ ಹತ್ಯೆ ಪ್ರಕರಣದಲ್ಲಿ ರಾಜ್ಯ ಸಿಐಡಿ ಮತ್ತು ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ವರದಿಗಳನ್ನು ಪರಿಶೀಲಿಸಿದ ಬಳಿಕ ನ್ಯಾ.ಧರ್ಮಾಧಿಕಾರಿ ಅವರು, ಇವು ಒಂದು ಅಥವಾ ಎರಡು ಬಿಡಿ ಘಟನೆಗಳಲ್ಲ ಎನ್ನುವುದನ್ನು ವರದಿಗಳು ಸ್ಪಷ್ಟಪಡಿಸಿವೆ. ಕೆಲವು ಸಂಸ್ಥೆಗಳು ಹಂತಕರಿಗೆ ಬೆಂಬಲ ನೀಡುತ್ತಿರಬೆಕು, ಅವರಿಗೆ ಆರ್ಥಿಕ ನೆರವು ಒದಗಿಸುತ್ತಿರಬೇಕು. ಈ ಹತ್ಯೆಗಳು ಸುಯೋಜಿತವಾಗಿವೆ ಎಂದು ಹೇಳಿದರು.
2013ರಲ್ಲಿ ದಾಭೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿಗಳೆಂದು ಗುರುತಿಸಲಾಗಿರುವ ಸಾರಂಗ ಅಕೋಲ್ಕರ್ ಮತ್ತು ವಿನಯ ಪವಾರ್ ಅವರನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎನ್ನುವುದನ್ನು ಗಮನಿಸಿದ ಪೀಠವು, ಸಿಬಿಐ ತನ್ನ ಈಗಿನ ತನಿಖಾ ವ್ಯಾಪ್ತಿಯ ಆಚೆಗೂ ಕಣ್ಣು ಹಾಯಿಸಬೇಕಿದೆ ಎಂದು ಹೇಳಿತು.
ಇಂದಿನ ಯುಗದಲ್ಲಿ ಯಾರಾದರೂ ಇಷ್ಟೊಂದು ಸುದೀರ್ಘ ಅವಧಿಗೆ ತಲೆಮರೆಸಿ ಕೊಳ್ಳಲು ಸಾಧ್ಯವಿಲ್ಲ ಎಂದ ನ್ಯಾಯಾಲಯವು, ರಾಜ್ಯ ಸಿಐಡಿಯ ಸಮನ್ವಯದೊಂದಿಗೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ತನಿಖೆ ನಡೆಸುವಂತೆ ಸಿಬಿಐ ಗೆ ಸೂಚಿಸಿತು.
ಮುಂದಿನ ವಿಚಾರಣಾ ದಿನಾಂಕವಾದ ಸೆ.13ರಂದು ಹೊಸದಾಗಿ ತನಿಖಾ ಪ್ರಗತಿ ವರದಿಗಳನ್ನು ಸಲ್ಲಿಸುವಂತೆ ಅದು ಉಭಯ ತನಿಖಾ ಸಂಸ್ಥೆಗಳಿಗೆ ನಿರ್ದೇಶ ನೀಡಿತು.
ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಸಿಬಿಐ ನಿರ್ದೇಶಕರನ್ನು ತನಿಖೆಗೆ ನೇರ ಹೊಣೆಗಾರರನ್ನಾಗಿಸಬೇಕೆಂಬ ತಮ್ಮ ಬೇಡಿಕೆಯನ್ನು ಉಲ್ಲೇಖಿಸಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರರು ಮತ್ತು ಮೃತ ವಿಚಾರವಾದಿಗಳ ಕುಟುಂಬ ಸದಸ್ಯರಿಗೆ ಸೂಚಿಸಿತು.
2013,ಆ.20ರಂದು ಪುಣೆ ನಿವಾಸಿ ದಾಭೋಲ್ಕರ್ ಅವರು ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದಾಗ ಗುಂಡಿಟ್ಟು ಅವರ ಹತ್ಯೆಯನ್ನು ಮಾಡಲಾಗಿತ್ತು.
2015,ಫೆ.16ರಂದು ಕೊಲ್ಲಾಪುರದಲ್ಲಿ ಪನ್ಸಾರೆಯವರ ಮೇಲೆ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದಿದ್ದರು.