ಉತ್ತರ ಪ್ರದೇಶ: ಆಸ್ಪತ್ರೆಯ ಶವಾಗಾರಕ್ಕೆ ನುಗ್ಗಿ ಮಹಿಳೆಯ ಮೃತದೇಹದ ಭಾಗಗಳನ್ನು ಕಚ್ಚಿ ತಿಂದ ಬೀದಿನಾಯಿಗಳು!
ಲಕ್ನೋ, ಆ.27: ಶವಾಗಾರಕ್ಕೆ ನುಗ್ಗಿದ ಬೀದಿನಾಯಿಗಳು ಮಹಿಳೆಯೊಬ್ಬರ ಮೃತದೇಹದ ಭಾಗಗಳನ್ನು ತಿಂದ ಘಟನೆ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಡೆದಿದೆ.
ವಿಷ ಸೇವಿಸಿದ್ದ ಮಹಿಳೆ ಪುಷ್ಪಾ ತಿವಾರಿ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ನಂತರ ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿತ್ತು. ಮರುದಿವಸ ಪುಷ್ಪಾ ತಿವಾರಿಯ ಕುಟುಂಬ ಮೃತದೇಹವನ್ನು ವೀಕ್ಷಿಸಿದಾಗ ಮೃತದೇಹದ ಕೆಲ ಭಾಗಗಳು ಕಚ್ಚಿ ತಿಂದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಅವರು ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ.
ಮಹಿಳೆಯ ಮುಖ ಹಾಗೂ ಕತ್ತಿನ ಭಾಗದ ಮಾಂಸಗಳನ್ನು ಕಚ್ಚಿ ಎಳೆದಿರುವುದು ಕಂಡುಬಂದಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ದೇವೇಂದ್ರ ನೇಗಿ ಹೇಳಿದ್ದಾರೆ. ಮೃತದೇಹವನ್ನು ಸಿಬ್ಬಂದಿ ಫ್ರೀಝರ್ ನಲ್ಲಿ ಇಡದ ಕಾರಣ ಬೀದಿನಾಯಿಗಳಿಗೆ ಸುಲಭವಾಗಿ ಸಿಕ್ಕುವಂತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೀಘ್ರದಲ್ಲೇ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥ ಪ್ರಶಾಂತ್ ತ್ರಿವೇದಿ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಹಿಳೆಯ ಪತಿಯ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.