ಕಾಶ್ಮೀರ: ಉಗ್ರರ ದಾಳಿಗೆ ಓರ್ವ ಪೊಲೀಸ್ ಬಲಿ; ಮೂವರಿಗೆ ಗಾಯ
ಶ್ರೀನಗರ, ಸೆ. 1: ಶ್ರೀನಗರ ಹೊರವಲಯದಲ್ಲಿ ಶುಕ್ರವಾರ ಸಂಜೆ ಭದ್ರತಾ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್ಸಿನ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್ ಪೇದೆ ಮೃತಪಟ್ಟು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ 8ರ ಸುಮಾರಿಗೆ ಪೊಲೀಸ್ ವಾಹನದ ಮೇಲೆ ಝಿವಾನ್ ಪ್ರದೇಶದಲ್ಲಿ ಉಗ್ರಗಾಮಿಗಳು ಗುಂಡಿನ ಮಳೆಗೆರೆದರು ಎಂದು ಹೇಳಲಾಗಿದೆ. ದಾಳಿಯಲ್ಲಿ ಮುಖ್ಯಪೇದೆ ಕಿಶನ್ಲಾಲ್ ಎಂಬಾತ ಮೃತಪಟ್ಟಿರುವುದನ್ನು ಅಧಿಕೃತ ಮೂಲಗಳು ಖಚಿತಪಡಿಸಿವೆ. ಮೆರಾಝುದ್ದೀನ್, ಅಬ್ದುಲ್ ಹಮೀದ್ ಹಾಗೂ ಶಬೀರ್ ಅಹ್ಮದ್ ಎಂಬ ಮೂವರು ಗಾಯಗೊಂಡಿದ್ದಾರೆ.
ಸ್ಥಳೀಯರು ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ಒಯ್ಯಲು ಸಹಕರಿಸಿದರು. ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಇ ತೋಯ್ಬ ಈ ದಾಳಿಯ ಹೊಣೆ ಹೊತ್ತಿದೆ. ಕಣಿವೆ ಪ್ರದೇಶದಲ್ಲಿ ಈದ್ ಹಬ್ಬದ ಆಚರಣೆಯ ಮುನ್ನವೇ ಈ ದಾಳಿ ನಡೆದಿದೆ.
ಹಬ್ಬದ ಸಂದರ್ಭದಲ್ಲಿ ಕಾಶ್ಮೀರದ ಮೇಲೆ ದಾಳಿ ನಡೆಸಲು ಜೈಶ್ ಇ ಮೊಹ್ಮದ್ ಸಂಘಟನೆ ಹೊಂಚು ಹಾಕಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವಹೀದ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.