ಅರ್ನಬ್ ಗೋಸ್ವಾಮಿಯ ಗಾಯಕ್ಕೆ ಉಪ್ಪು ಸವರಿದ ಕ್ಯಾಮರಾಮ್ಯಾನ್ !
ಈ ಸತ್ಯ ಅರಗಿಸಿಕೊಳ್ಳಲು ಕಷ್ಟ ಸ್ವಾಮೀ...
ಹೊಸದಿಲ್ಲಿ, ಸೆ.22: 2002ರ ಗುಜರಾತ್ ಗಲಭೆಯ ಸಂದರ್ಭ ತನ್ನ ಕಾರಿನ ಮೇಲೆ ದಾಳಿ ನಡೆದಿತ್ತು ಎಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರ ವಿಡಿಯೋವೊಂದು ವೈರಲ್ ಆಗಿ, ನಂತರ ಆ ವಿಡಿಯೋದ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಿ ಗೋಸ್ವಾಮಿಯವರನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಆನಂತರ ಟ್ವಿಟ್ಟರಿಗರು #Arnabdidit ಹ್ಯಾಶ್ ಟಾಗ್ ಮೂಲಕ ಮಹಾ ಮಂಗಳಾರತಿ ಮಾಡಿದ್ದರು.
ಆದರೆ ಆನಂತರದ ಮತ್ತೊಂದು ಬೆಳವಣಿಗೆಯಿಂದ ಅರ್ನಬ್ ಗೋಸ್ವಾಮಿಯ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಎನ್ ಡಿಟಿವಿಯ ಕ್ಯಾಮರಾಮ್ಯಾನ್ ಗುಜರಾತ್ ಗಲಭೆಯ ಸಂದರ್ಭ ನಡೆದ ಘಟನೆಯ ಸತ್ಯಾಂಶವನ್ನು ಅವರು ವಿವರಿಸಿದ್ದಾರೆ.
ಇಂಡಿಯಾ ಟುಡೆ ನಡೆಸಿದ ಸಂದರ್ಶನವೊಂದರಲ್ಲಿ ಎನ್ ಡಿಟಿವಿಯ ಕ್ಯಾಮರಾಮ್ಯಾನ್ ರೂಪನ್ ಪಹ್ವಾ ಮಾತನಾಡಿ, “ವಾಸ್ತವವಾಗಿ ಅಲ್ಲಿ ಇದ್ದದ್ದು ರಾಜ್ ದೀಪ್ ಸರ್ದೇಸಾಯಿ ಹಾಗೂ ಅವರ ತಂಡ. ಗುಜರಾತ್ ಗಲಭೆಯ ಬಗ್ಗೆ ವರದಿ ಮಾಡಲು ಅವರು ತೆರಳಿದ್ದರು. ಈ ಸಂದರ್ಭ ತಂಡವೊಂದು ಕಾರಿನ ಮೇಲೆ ದಾಳಿ ನಡೆಸಿತ್ತು ಎಂದಿದ್ದಾರೆ.
ಆದರೆ ವೈರಲ್ ಆದ ವಿಡಿಯೋದಲ್ಲಿ ಅರ್ನಾಬ್ ತಾನಿದ್ದ ಕಾರಿನ ಮೇಲೆ ದಾಳಿ ನಡೆದಿತ್ತು ಎಂದಿದ್ದರು.
ತಾನು ತೆರಳುತ್ತಿದ್ದ ಕಾರಿನ ಮೇಲೆ ಸುಮಾರು 300 ಮಂದಿಯಷ್ಟಿದ್ದ ತಂಡವೊಂದು ದಾಳಿ ನಡೆಸಿತ್ತು. ಮುಂದಿನ ಸೀಟಿನಲ್ಲಿ ಸರ್ದೇಸಾಯಿ ಕೂತಿದ್ದರು. ಕಾರಿನಲ್ಲಿದ್ದ ಹಿರಿಯ ಸಂಪಾದಕರು ದಾಳಿ ನಡೆಸಿದವರೊಂದಿಗೆ ಮಾತನಾಡಿದರು ಎಂದವರು ಹೇಳಿದ್ದಾರೆ.
ತಮ್ಮ ಪ್ರಾಣವನ್ನುಳಿಸಲು ಶಕ್ತರಾದ ನಂತರ ಆ ಪ್ರದೇಶದಿಂದ ಪಂಕ್ಚರ್ ಆದ ಕಾರಿನಲ್ಲೇ ಬೇರೆಡೆಗೆ ತೆರಳಿದೆವು. ಚಾಲಕ ಸಂಪೂರ್ಣವಾಗಿ ಹೆದರಿ ನಡುಗುತ್ತಿದ್ದರೂ ಕಾರನ್ನು ಗಾಂಧಿನಗರದ ಕಚೇರಿಗೆ ತಲುಪಿಸಿದ ಎಂದವರು ಹೇಳಿದ್ದಾರೆ.
ತಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆದಿತ್ತು ಎನ್ನುವ ಅರ್ನಾಬ್ ಹೇಳಿಕೆಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ರೂಪನ್ ಪಹ್ವಾ, ಒಂದು ಕ್ಷಣ ನಕ್ಕರು. ನಂತರ ನಾನು ಅವರನ್ನು ಖಂಡಿತವಾಗಿಯೂ ಅಲ್ಲಿ ನೋಡಿರಲಿಲ್ಲ ಹಾಗೂ ಅವರು ಅಲ್ಲಿರಲು ಸಾಧ್ಯವೇ ಇಲ್ಲ ಎಂದು ಪಹ್ವಾನ್ ಹೇಳಿದರು.
ಫೇಕ್ ಸುದ್ದಿಗಳನ್ನು ದೂರವಿಡಿ, ಸತ್ಯದ ಜೊತೆಗಿರಿ ಎಂದು ಅವರು ಸಂದರ್ಶನದ ಕೊನೆಯಲ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಕೇರಳಿಗರನ್ನು ಕೆಣಕಿದ ಪರಿಣಾಮ ರೇಟಿಂಗ್ ವಿಚಾರದಲ್ಲಿ ಸಮಸ್ಯೆಯನ್ನು ಅನುಭವಿಸಿದ್ದ ಅರ್ನಾಬ್ ಮತ್ತೊಮ್ಮೆ ತಮ್ಮದೇ ಹೇಳಿಕೆಯಿಂದ ಮುಜುಗರಕ್ಕೀಡಾಗಿದ್ದಾರೆ. ರಾಜ್ ದೀಪ್ ಸರ್ದೇಸಾಯಿ ‘ಫೇಕು’ ವಿಡಿಯೋದ ಅಸಲಿಯತ್ತನ್ನು ಬಯಲಿಗೆಳೆದ ನಂತರ ಅರ್ನಾಬ್ ಗೆ ಟ್ಟಿಟ್ಟರಿಗರು #Arnabdidit ಹ್ಯಾಶ್ ಟ್ಯಾಗ್ ಮೂಲಕ ಮಂಗಳಾರತಿ ಎತ್ತಿದ್ದರು. ಇದೀಗ ಎನ್ ಡಿಟಿವಿಯ ಕ್ಯಾಮೆರಾಮ್ಯಾನ್ ಅವರ ಹೇಳಿಕೆ ಅರ್ನಾಬ್ ಗಾಯಕ್ಕೆ ಉಪ್ಪು ಸವರಿದಂತಾಗಿದೆ.