ಜಗತ್ತಿನಿಂದಲೇ ಸೊಳ್ಳೆ ಹೊಡೆದೋಡಿಸಲು ಸುಪ್ರೀಂ ಕೋರ್ಟಿನ ಕದ ತಟ್ಟಿದ ವ್ಯಕ್ತಿ !
ನ್ಯಾಯಾಲಯ ಹೇಳಿದ್ದೇನು ?
ಹೊಸದಿಲ್ಲಿ,ಸೆ.23 : ಸುಪ್ರೀಂ ಕೋರ್ಟ್ ಕೂಡಾ ಏನೂ ಮಾಡದಂತಹ ಕೆಲವು ವಿಚಾರಗಳಿರುತ್ತವೆ. ಶುಕ್ರವಾರ ಇಂತಹ ಒಂದು ಅಪೀಲು ನ್ಯಾಯಾಲಯದ ಮುಂದೆ ಬಂದಾಗ ಈ ವಿಚಾರದಲ್ಲಿ ತಾನು ಅಸಹಾಯಕ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ ಮನವಿಯೇನು ಗೊತ್ತೇ ? ಈ ಜಗತ್ತಿನ ಅತ್ಯಂತ ಅಪಾಯಕಾರಿ ಜೀವಿಗಳಾದ ಸೊಳ್ಳೆಗಳನ್ನು ಜಗತ್ತಿನಿಂದಲೇ ಓಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಆತ ನ್ಯಾಯಾಲಯಕ್ಕೆ ಮನವಿ ಮಾಡಿದ್ದ.
``ನಾವೇನೂ ದೇವರಲ್ಲ. ಕೇವಲ ದೇವರು ಮಾತ್ರ ಮಾಡಬಹುದಾದ ಕೆಲಸಗಳನ್ನು ನಮಗೆ ಮಾಡುವಂತೆ ಹೇಳಬೇಡಿ'' ಎಂದು ಸುಪ್ರೀಂ ಕೋರ್ಟಿನ ಇಬ್ಬರು ಸದಸ್ಯರ ಪೀಠ ಅರ್ಜಿದಾರ ಧನೇಶ್ ಲೆಶ್ಧನ್ ಗೆ ಹೇಳಿದೆ.
ವಿಶ್ವದಾದ್ಯಂತ ವಾರ್ಷಿಕ 7.25 ಲಕ್ಷ ಜನರನ್ನು ಕೊಲ್ಲುವ ಈ ಸೊಳ್ಳೆಗಳನ್ನು ನಿಯಂತ್ರಿಸುವುದು ವಿಜ್ಞಾನಿಗಳಿಗೂ ಸಾರ್ವಜನಿಕ ಆರೋಗ್ಯ ತಜ್ಞರಿಗೂ ದೊಡ್ಡ ಸವಾಲಿನ ಕೆಲಸವೇ ಆಗಿದ್ದರೂ ಈ ವಿಚಾರದಲ್ಲಿ ನ್ಯಾಯಾಲಯದ ಮಧ್ಯ ಪ್ರವೇಶಕ್ಕೆ ಧನೇಶ್ ಆಗ್ರಹಿಸಿದ್ದರು.
``ನಾವೇನು ಎಲ್ಲರ ಮನೆಗಳಿಗೂ ಹೋಗಿ ಅಲ್ಲಿ ಸೊಳ್ಳೆ ,ನೊಣಗಳಿವೆ. ಅವುಗಳನ್ನು ಸಾಯಿಸಿ,'' ಎಂದು ಹೇಳಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಮದನ್ ಬಿ ಲೋಕೂರು ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಹೇಳಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು.