ಹನಿಪ್ರೀತ್ ಬಂಧನಕ್ಕೆ ದಿಲ್ಲಿಯಲ್ಲಿ ಹರ್ಯಾಣ ಪೊಲೀಸರ ಹುಡುಕಾಟ
ಹೊಸದಿಲ್ಲಿ, ಸೆ.26: ಇಬ್ಬರು ಸಾದ್ವಿಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ರನ್ನು ಸೆರೆ ಹಿಡಿಯಲು ಹರ್ಯಾಣ ಪೊಲೀಸರು ದಿಲ್ಲಿಯಾದ್ಯಂತ ಮಂಗಳವಾರ ದಾಳಿ ನಡೆಸಿ ಹುಡುಕಾಟ ನಡೆಸಿದ್ದಾರೆ.
ನಿರೀಕ್ಷಣಾ ಜಾಮೀನಿಗಾಗಿ ಹನಿಪ್ರೀತ್ ದಿಲ್ಲಿ ಹೈಕೋರ್ಟ್ನ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಹರ್ಯಾಣ ಪೊಲೀಸರು ಹನಿಪ್ರೀತ್ರನ್ನು ಹೇಗಾದರೂ ಮಾಡಿ ಸೆರೆ ಹಿಡಿಯಲೇಬೇಕೆಂಬ ಪ್ರಯತ್ನದಲ್ಲಿದ್ದಾರೆ.
ಹನಿಪ್ರೀತ್ ವಿರುದ್ಧ ಬಂಧನವಾರಂಟ್ ಹೊರಡಿಸಿದ ಬಳಿಕ ಪಂಚಕುಲ ಪೊಲೀಸರು ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ದಾಳಿ ನಡೆಸಿದ್ದರು. ಆದರೆ ಅಲ್ಲಿ ಹನಿಪ್ರೀತ್ ಪತ್ತೆಯಾಗಿಲ್ಲ.
ಗುರ್ಮೀತ್ ಸಿಂಗ್ ಎರಡು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಗುರಿಯಾದ ದಿನ ಹರ್ಯಾಣದಾದ್ಯಂತ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಹರ್ಯಾಣ ಪೊಲೀಸರು ಹನಿಪ್ರೀತ್ ಅಲಿಯಾಸ್ ಪ್ರಿಯಾಂಕಾ ತನೇಜಾ ಸಹಿತ 43 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.