ಪುತ್ರನನ್ನು ತಂದೆಯ ವಿರುದ್ಧ ಎತ್ತಿ ಕಟ್ಟಲು ನಡೆಸಿದ ಅಗ್ಗದ ತಂತ್ರಗಾರಿಕೆ
ಜಯಂತ್ ಸಿನ್ಹಾ ಹೇಳಿಕೆಗೆ ಯಶವಂತ್ ಸಿನ್ಹಾ ಪ್ರತಿಕ್ರಿಯೆ
ಹೊಸದಿಲ್ಲಿ, ಸೆ.29 : ಹತಾಶ ವ್ಯಕ್ತಿಯೊಬ್ಬನ ಅನಗತ್ಯ ಗದ್ದಲ ಎಂದು ಆಡಳಿತ ಪಕ್ಷವು ತಾನು ಸರಕಾರದ ವಿರುದ್ಧ ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ರೀತಿಯು ಅತ್ಯಂತ ಸುಲಭ ಹಾಗೂ ಅಗ್ಗದ ವಿಧಾನವಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ. ಕೇಂದ್ರ ಸಚಿವನಾಗಿರುವ ತಮ್ಮ ಪುತ್ರ ಜಯಂತ್ ಸಿನ್ಹಾ ಬಳಿ ಸರಕಾರವನ್ನು ಸಮರ್ಥಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರೆಯಲು ಹೇಳಿದ್ದಲ್ಲಿ 'ಪುತ್ರನೊಬ್ಬನನ್ನು ತಂದೆಯ ವಿರುದ್ಧ ಎತ್ತಿ ಕಟ್ಟಲು ನಡೆಸಿದ ಅಗ್ಗದ ತಂತ್ರಗಾರಿಕೆಯಾಗುವುದು' ಎಂದಿದ್ದಾರೆ.
``ಆತ ತನ್ನ ಧರ್ಮ ಮಾಡುತ್ತಿದ್ದಾನೆ, ನಾನು ನನ್ನ ಧರ್ಮ ಮಾಡುತ್ತಿದ್ದೇನೆ,'' ಎಂದು ಯಶವಂತ್ ಸಿನ್ಹಾ ತನ್ನ ಪುತ್ರನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೋದಿ ಸರಕಾರ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದೇಶದ ಆರ್ಥಿಕತೆಯನ್ನು ಅವ್ಯವಸ್ಥೆಯತ್ತ ಒಯ್ದಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ತಮ್ಮ ಬರಹವೊಂದರಲ್ಲಿ ಯಶವಂತ್ ಸಿನ್ಹಾ ಬರೆದಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ಸುದ್ದಿ ವಾಹಿನಿಯೊಂದಿಗೆ ನಂತರ ಮಾಡಿದ ಯಶವಂತ್ ಸಿನ್ಹಾ ಜೇಟ್ಲಿಯೇನೂ ರಾಜೀನಾಮೆ ನೀಡಬೇಕಿಲ್ಲ, ಆದರೆ ಮುಂದಿನ 15 ದಿನಗಳೊಳಗಾಗಿ ಸರಕಾರವು ಪರಿಸ್ಥಿತಿಯ ಅವಲೋಕನ ನಡೆಸಿ ನಿಂತು ಹೋಗಿರುವ ಕೋಟಿಗಟ್ಟಲೆ ವೆಚ್ಚದ ಯೋಜನೆಗಳ ಬಗ್ಗೆ ಚಿಂತಿಸಿ ಯಾವುದನ್ನು ರದ್ದು ಪಡಿಸಿ ಯಾವುದನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದನ್ನು ನಿರ್ಧರಿಸಬೇಕೆಂದರು.
"2014ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನನ್ನ ನಿರ್ಧಾರವನ್ನು ನಾನೇ ಅಂದಿನ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತಿಳಿಸಿದ್ದೆ. ಹೀಗಿರುವಾಗ ನನ್ನ ರಾಜಕೀಯ ಉದ್ದೇಶಗಳನ್ನು ಈಡೇರಿಸಲಾಗಿಲ್ಲವೆಂಬ ಕಾರಣಕ್ಕೆ ನಾನು ಸರಕಾರವನ್ನು ಟೀಕಿಸಿದ್ದೇನೆ" ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎದು ಯಶವಂತ್ ಸಿನ್ಹಾ ಹೇಳಿದ್ದಾರೆ.
ತಾನು ಯಾವತ್ತೂ ಬಿಜೆಪಿ ಜತೆಗಿರುವುದಾಗಿ ಹೇಳಿದ ಅವರು ತಾವು ತಮ್ಮ ಪಕ್ಷದ ಸದಸ್ಯತ್ವವನ್ನು ಕೂಡ ನವೀಕರಿಸಿದ್ದಾಗಿ ತಿಳಿಸಿದರು.