ಗುರ್ಮೀತ್ ಜತೆಗಿನ ಸಂಬಂಧ: ಹನಿಪ್ರೀತ್ ಹೇಳಿದ್ದೇನು?
ಪಂಚಕುಲ, ಅ.4: ದೇರಾ ಸಚ್ಛಾ ಸೌಧ ಪಂಥದ ಮುಖಂಡ ಗುರ್ಮೀತ್ ಸಿಂಗ್ ಬಂಧನ, ಬಳಿಕ ನಡೆದ ವ್ಯಾಪಕ ಹಿಂಸಾಚಾರದ ಘಟನೆ ನಡೆದ 39 ದಿನಗಳ ಬಳಿಕ ತಲೆಮರೆಸಿಕೊಂಡಿದ್ದ ಮಗಳು ಹನಿಪ್ರೀತ್ ಇಶಾನ್ ಬಂಧನಕ್ಕೀಡಾಗಿದ್ದಾರೆ. ಈ ವೇಳೆ ತಂದೆಯ ಜತೆ ತನಗೆ ಯಾವುದೇ ಅನೈತಿಕ ಸಂಬಂಧ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಹರ್ಯಾಣ ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದರು. ಝಿರಾಕ್ಪುರ- ಪಾಟಿಯಾಲಾ ಹೆದ್ದಾರಿಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಾಗ ನಾಲ್ವರು ವಕೀಲರ ತಂಡ ಜತೆಗಿತ್ತು. ಮಂಗಳವಾರ ಮುಂಜಾನೆಯಿಂದ ಪಂಚಕುಲದ ಹೊರವಲಯದಲ್ಲಿದ್ದ ಆಕೆ ಶರಣಾಗತಿಗಾಗಿ ಬರುತ್ತಿದ್ದರು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
"ತಂದೆ- ಮಗಳ ಸಂಬಂಧವನ್ನು ಜನ ಹೇಗೆ ಅಕ್ರಮ ಸಂಬಂಧ ಎಂದು ಕಲ್ಪಿಸಿಕೊಳ್ಳುತ್ತಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರಲ್ಲಿ ಇದಕ್ಕೆ ಯಾವ ಪುರಾವೆ ಇದೆ? ಅಂಥ ಜನರನ್ನು ದಯವಿಟ್ಟು ನಂಬಬೇಡಿ" ಎಂದು ಟಿವಿ ಸಂದರ್ಶನದಲ್ಲಿ, ಅಕ್ರಮ ಸಂಬಂಧ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ದೇರಾ ಕ್ಯಾಂಪಸ್ನಿಂದ ಅಸ್ಥಿಪಂಜರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮಹಿಳೆಯರನ್ನು ಸಿಂಗ್ ಶೋಷಿಸುತ್ತಿದ್ದರು ಎಂಬ ಆರೋಪಗಳನ್ನು ಅವರು ಅಲ್ಲಗಳೆದರು. "ಯಾರಿಗಾದರೂ ಅಸ್ಥಿಪಂಜರ ಸಿಕ್ಕಿದೆಯೇ? ನನ್ನ ತಂದೆ ಬಗ್ಗೆ ಏನು ಹೇಳಿದರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಅವರು ಅಮಾಯಕರು. ಸಮಯ ಅದನ್ನು ಸಾಬೀತುಪಡಿಸಲಿದೆ. ಕೋಟ್ಯಂತರ ಮಹಿಳೆಯರು ಮತ್ತು ಹುಡುಗಿಯರು ಅವರಿಂದ ಸಬಲರಾಗಿದ್ದಾರೆ" ಎಂದು ಸಮರ್ಥಿಸಿಕೊಂಡರು.
ನೀವು ಇಬ್ಬರು ಮಹಿಳೆಯರನ್ನು ನಂಬಿ ಲಕ್ಷಾಂತರ ಮಂದಿಯನ್ನು ನಂಬುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಪಪ್ಪ ಅವರ ಬಂಧನ ನನ್ನಲ್ಲಿ ಖಿನ್ನತೆ ಉಂಟು ಮಾಡಿದೆ. ಅವರನ್ನು ಜೈಲಿಗೆ ಕರೆದೊಯ್ಯುವಾಗ ಮಾತೇ ಹೊರಡಲಿಲ್ಲ ಎಂದು ವಿವರಿಸಿದರು.