ಒದ್ದೆ ಪಟಾಕಿಯಂತಾದ ಅಮಿತ್ ಶಾ ಕೇರಳ ಯಾತ್ರೆ: ಪಿಣರಾಯಿ ವಿಜಯನ್
"ಗೋಡ್ಸೆ ಬೆಂಬಲಿಗರಿಂದ ಯಾವ ಶಾಂತಿಯ ಪಾಠವೂ ಬೇಕಾಗಿಲ್ಲ"
ತಿರುವನಂತಪುರಂ, ಅ.5 : "ನಾಥೂರಾಮ್ ಗೋಡ್ಸೆಯಂತಹ ವ್ಯಕ್ತಿಗಳನ್ನು ದೇವರೆಂದು ಪರಿಗಣಿಸುವ ನಿಮ್ಮಂತಹ ಜನರಿಂದ ಕೇರಳಕ್ಕೆ ಯಾವ ಶಾಂತಿಯ ಪಾಠವೂ ಬೇಕಾಗಿಲ್ಲ. ನೀವು ನಮ್ಮನ್ನು ಬೆದರಿಸಲು ಪ್ರಯತ್ನಿಸಿದರೆ, ನೆನಪಿಡಿ, ಇಂತಹ ಸವಾಲುಗಳನ್ನು ಕೈಗೆತ್ತಿಕೊಳ್ಳುವ ಧೈರ್ಯ ನಮಗೆ ಯಾವತ್ತೂ ಇದ್ದೇ ಇದೆ'' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ಉದ್ದೇಶಿಸಿ ಹೇಳಿದ್ದಾರೆ.
"ಅಮಿತ್ ಶಾ ಕೇರಳಕ್ಕೆ ಬಂದು ಪಕ್ಷದ ಬಲ ಪ್ರದರ್ಶಿಸುತ್ತಾರೆಂದು ಬಿಜೆಪಿ ಹೇಳಿತ್ತು, ಆದರೆ ಇಡೀ ಯಾತ್ರೆ ಒದ್ದೆ ಪಟಾಕಿಯಂತಾಯಿತು'' ಎಂದು ವಿಜಯನ್ ಬಿಜೆಪಿಗೆ ತಿರುಗೇಟಿ ನೀಡಿದ್ದಾರೆ. "ನಮ್ಮನ್ನು ಹೆದರಿಸಬಹುದು ಎಂದು ಯಾರೂ ತಿಳಿಯಬಾರದು. ಕೇಂದ್ರದ ಮತ್ತು ಇತರ ರಾಜ್ಯಗಳ ಹಳೆಯ ಆರೆಸ್ಸೆಸ್ ಮುಖಗಳನ್ನು ಹೊತ್ತುಕೊಂಡು ಇಲ್ಲಿ ಏನಾದರೂ ಮಾಡಬಹುದೆಂದು ಅವರಂದುಕೊಂಡಿದ್ದರೆ ಅದು ತಪ್ಪು'' ಎಂದರು ಪಿಣರಾಯಿ.
"ಕೇಂದ್ರ ಸರಕಾರ ಅಧಿಕಾರವನ್ನು ದುರುಪಯೋಗಿಸಿ ಬಿಜೆಪಿ ಜಾತ್ಯತೀತತೆಯನ್ನು ನಾಶಗೊಳಿಸುತ್ತಿದೆ. ಸಂಘ ಪರಿವಾರದ ಮಂದಿ ನಡೆಸುವ ಕೊಲೆ ಹಾಗೂ ದಾಳಿಗಳಿಗೂ ಆರೆಸ್ಸೆಸ್ ಸಂಘಟನೆಯ ಹಿರಿಯ ಸಂಘಟಕರಿಗೂ ಸ್ಪಷ್ಟ ನಂಟಿದೆ'' ಎಂದು ಪಿಣರಾಯಿ ಆರೋಪಿಸಿದರು.