ಪಿಣರಾಯಿ ಆದೇಶದಂತೆ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ: ಅಮಿತ್ ಶಾ ಆರೋಪ
“ಬರ್ಬರವಾಗಿ ಕಡಿದು ಕೊಲೆ ಮಾಡುತ್ತಿರುವುದು ಏಕೆ?”
ಹೊಸದಿಲ್ಲಿ, ಅ.8: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ಆದೇಶದಂತೆ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಜನರಕ್ಷಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಭಯವನ್ನು ಹುಟ್ಟುಹಾಕಲು ಹಾಗು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ಆರೆಸ್ಸೆಸ್ ಹಾಗು ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ‘ಆದೇಶದಂತೆ’ ಕೇರಳದಲ್ಲಿ ರಾಜಕೀಯ ಹತ್ಯೆಗಳು ನಡೆಯುತ್ತಿದೆ ಎಂದರು.
“ಕೇರಳದಲ್ಲಿ ಸಿಪಿಎಂ ಸರಕಾರ ಅಧಿಕಾರಕ್ಕೆ ಬಂದ ನಂತರ 120 ಬಿಜೆಪಿ ಕಾರ್ಯಕರ್ತರನ್ನು ಕೊಲೆಗೈಯಲಾಗಿದೆ. ಒಬ್ಬ ಮನುಷ್ಯನನ್ನು ಬುಲೆಟ್ ನಿಂದಲೂ ಕೊಲೆಗೈಯಬಹುದಾದರೆ ಬಿಜೆಪಿ ಕಾರ್ಯಕರ್ತರನ್ನೇಕೆ ಬರ್ಬರವಾಗಿ ಕಡಿದು ಕೊಲೆಗೈಯಲಾಗುತ್ತಿದೆ” ಎಂದವರು ಈ ಸಂದರ್ಭ ಪ್ರಶ್ನಿಸಿದರು.
“ಯಾರಾದರೂ ಬಿಜೆಪಿ ಸೇರಿದರೆ ಅಥವಾ ಬೆಂಬಲ ಸೂಚಿಸಿದರೆ ಅಂತಹವರನ್ನು ಕೊಲ್ಲಲಾಗುವುದು ಎನ್ನುವ ಸಂದೇಶವನ್ನು ರವಾನಿಸಲು ಈ ರೀತಿಯ ಕೊಲೆಗಳು ಸಂಭವಿಸುತ್ತಿದೆ” ಎಂದು ಅಮಿತ್ ಶಾ ಆರೋಪಿಸಿದರು.