ವರದಕ್ಷಿಣೆ ತಡೆ ಕಾನೂನು ಮರು ಅವಲೋಕನ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಅ. 14: ತನ್ನ ಹಿಂದಿನ ಆದೇಶದಿಂದ ಮಹಿಳೆಯರ ಹಕ್ಕಿನ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಭಾವಿಸಿರುವ ಸುಪ್ರೀಂ ಕೋರ್ಟ್, ವರದಕ್ಷಿಣೆ ವಿರೋಧಿ ಕಾನೂನಿನ ಗಂಭೀರತೆ ಕಡಿಮೆ ಮಾಡುವ ತನ್ನ ಎರಡು ತಿಂಗಳ ಹಳೆಯ ತೀರ್ಪನ್ನು ಮರು ಪರಿಶೀಲಿಸಲಾಗುವುದು ಎಂದಿದೆ.
ಅಮಾಯಕರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪವನ್ನು ಪರಿಶೀಲಿಸದೆ ಯಾವುದೇ ಬಂಧನ ಜಾರಿಗೊಳಿಸು ವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಜುಲೈ 25ರಂದು ನಿರ್ದೇಶಿಸಿತ್ತು.
ಈ ನಿರ್ದೇಶನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವರದಕ್ಷಿಣೆ ವಿರುದ್ಧದ ಹೋರಾಟವನ್ನು ಇದು ದುರ್ಬಲಗೊಳಿಸಿದೆ ಎಂದು ಮಹಿಳಾ ಹೋರಾಟಗಾರರು ಪ್ರತಿಪಾದಿಸಿದ್ದರು. ಕಾನೂನಿನ ದುರ್ಬಳಕೆ ಹೆಚ್ಚುತ್ತಿರುವುದನ್ನು ತಡೆಯಲು ಈ ನಿರ್ದೇಶನ ತುಂಬಾ ಮುಖ್ಯ ಎಂದು ಪುರುಷರ ಪರವಾದ ಹೋರಾಟಗಾರರು ಹೇಳಿದ್ದರು. ಪತಿ ಹಾಗೂ ಪತಿಯ ಸಂಬಂಧಿಕರ ವಿರುದ್ಧದ ಆರೋಪ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಸಮಿತಿಯ ಬಫರ್ ರೂಪಿಸಿರುವುದರಿಂದ ಐಪಿಸಿ ಅಡಿಯಲ್ಲಿ ಬರುವ 498 ಎ ಕಾಯ್ದೆ (ವಿವಾಹಿತ ಮಹಿಳೆ ಮೇಲಿನ ಕ್ರೌರ್ಯ ತಡೆ) ಗಂಭೀರತೆ ನಿರಸನವಾಗುವ ಈ ಹಿಂದಿನ ತೀರ್ಪಿನ ಬಗ್ಗೆ ಸಹಮತ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಅಕ್ಟೋಬರ್ 29ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
498ಎ ಕಾಯ್ದೆ ಕಠಿಣಗೊಳಿಸಬೇಕು. ಇಲ್ಲದೇ ಇದ್ದರೆ, ಸಂತ್ರಸ್ತ ಮಹಿಳೆ ಕೈಯಲ್ಲಿರುವ ಈ ಕಾಯ್ದೆ ಅನುಪಯುಕ್ತವಾಗಲಿದೆ ಎಂದು ಸರಕಾರೇತರ ಸಂಸ್ಥೆಯ ನ್ಯಾಯಾಧರ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.