ಚುನಾವಣಾ ಆಯೋಗಕ್ಕೆ ಲಂಚ ಪ್ರಕರಣ: ಆರು ವಾರದೊಳಗೆ ತನಿಖೆ ಪೂರ್ಣ
ಹೊಸದಿಲ್ಲಿ, ಅ.16: ಎಐಎಡಿಂಕೆ ಮುಖಂಡ ಟಿಟಿವಿ ದಿನಕರನ್ ಒಳಗೊಂಡಿರುವ ಚುನಾವಣಾ ಆಯೋಗಕ್ಕೆ ಲಂಚ ಪ್ರಕರಣದ ತನಿಖೆಯನ್ನು 4ರಿಂದ 6 ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ತನಿಖಾ ಕಾರ್ಯದ ಪ್ರಚಲಿತ ಸ್ಥಿತಿಯ ಕುರಿತು ತನಿಖಾ ವರದಿಯ ಪ್ರಗತಿ ಪ್ರಮಾಣಪತ್ರವನ್ನು ಡಿಸೆಂಬರ್ 5ರೊಳಗೆ ಸಲ್ಲಿಸುವಂತೆ ನ್ಯಾಯಾಲಯವು ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ವಿಭಾಗಕ್ಕೆ ಸೂಚಿಸಿತು.
ಸಹ ಆರೋಪಿ ಹಾಗೂ ಪ್ರಕರಣದಲ್ಲಿ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸಿದ್ದ ಸುಕೇಶ್ ಚಂದ್ರಶೇಖರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಸೂಚನೆ ನೀಡಿದೆ. ಅಲ್ಲದೆ ಈ ಹಿಂದೆಯೇ ಜಾಮೀನು ಪಡೆದಿರುವ ಇತರ ಆರೋಪಿಗಳಾದ ದಿನಕರನ್, ಮಲ್ಲಿಕಾರ್ಜುನ, ಶಂಕಿತ ಹವಾಲಾ ಏಜೆಂಟರಾದ ನಾಥು ಸಿಂಗ್ ಮತ್ತು ಲಲಿತ್ ಕುಮಾರ್ ಅವರ ಕುರಿತ ತನಿಖಾ ಕಾರ್ಯದ ಪ್ರಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತು.
ಇದಕ್ಕೆ ಉತ್ತರಿಸಿದ ಫಿರ್ಯಾದಿದಾರರ ಪರ ವಕೀಲರು ತನಿಖೆ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.