ಭಾರತೀಯ ಕಾರ್ಮಿಕರ ಬೆವರು, ರಕ್ತದಿಂದ ತಾಜ್ ಮಹಲ್ ನಿರ್ಮಾಣ: ಯುಪಿ ಸಿಎಂ ಆದಿತ್ಯನಾಥ್
ಹೊಸದಿಲ್ಲಿ, ಅ.17: ಆಗ್ರಾದ ತಾಜ್ ಮಹಲ್ ನಿರ್ಮಿಸಿದ ಮೊಗಲ್ ದೊರೆಗಳನ್ನು ದ್ರೋಹಿಗಳು ಹಾಗೂ ಅದು ಭಾರತೀಯ ಸಂಸ್ಕೃತಿಯ ಮೇಲೊಂದು ಕಪ್ಪು ಚುಕ್ಕೆ ಎಂದು ವರ್ಣಿಸಿ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದಕ್ಕೆ ಆಹ್ವಾನ ನೀಡಿದ್ದರೆ, ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ, ‘‘ಅದನ್ನು ಯಾರು ನಿರ್ಮಿಸಿದ್ದರೆಂಬುದು ಇಲ್ಲಿ ಅಪ್ರಸ್ತುತ. ಆದರೆ ಅದು ಭಾರತೀಯ ಕಾರ್ಮಿಕರ ಬೆವರು ಮತ್ತು ರಕ್ತದಿಂದ ನಿರ್ಮಿತವಾಗಿದೆ’’ ಎಂದು ಹೇಳಿ ಪರೋಕ್ಷವಾಗಿ ಸಂಗೀತ್ ಸೋಮ್ ಗೆ ಸಡ್ಡು ಹೊಡೆದಿದ್ದಾರೆ.
ತಾವು ಅಕ್ಬೋಟರ್ 26ರಂದು ಆಗ್ರಾಗೆ ಭೇಟಿ ನೀಡುವಾಗ ತಾಜ್ ಮಹಲ್ ಹಾಗೂ ನಗರದ ಇತರ ಸ್ಮಾರಕಗಳನ್ನೂ ಸಂದರ್ಶಿಸುವುದಾಗಿ ಅವರು ತಿಳಿಸಿದ್ದಾರೆ.
‘‘ತಾಜ್ ಮಹಲ್ ಒಂದು ವಿಶ್ವ ದರ್ಜೆಯ ಸ್ಮಾರಕ. ಭಾರತದ ಅತ್ಯಂತ ಪ್ರಮುಖ ಪ್ರವಾಸಿ ತಾಣ ಅದಾಗಿದ್ದು, ಅಲ್ಲಿ ಭೇಟಿ ನೀಡುವವರಿಗೆ ಉತ್ತಮ ಸೌಕರ್ಯ ಒದಗಿಸುವುದು ಉತ್ತರ ಪ್ರದೇಶ ಸರಕಾರದ ಕರ್ತವ್ಯವಾಗಿದೆ. ಇದಕ್ಕಾಗಿ ನಾವು ರೂ.370 ಕೋಟಿಯ ಯೋಜನೆಯೊಂದನ್ನು ಸಿದ್ಧಪಡಿಸಿದ್ದೇವೆ’’ ಎಂದೂ ಆದಿತ್ಯನಾಥ್ ಹೇಳಿದ್ದಾರೆ.