ಕೇದಾರನಾಥ ದೇವಳಕ್ಕೆ ಪ್ರಧಾನಿ ಭೇಟಿ: ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಹರಿದ್ವಾರ, ಅ.20: ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದದಲ್ಲಿರುವ ಕೇದಾರನಾಥ ದೇವಳಕ್ಕೆ ಭೇಟಿ ನೀಡಿ ದೇವಳದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಹಿಮಾಲಯದ ತಪ್ಪಲಲ್ಲಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ತನ್ನ ದೃಢಸಂಕಲ್ಪಕ್ಕೆ ಪುನಶ್ಚೇತನ ದೊರಕಿದೆ ಎಂದು ಹೇಳಿದರು.
ಜನತಾ ಸೇವೆಯೇ ನಿಜವಾದ ಅರ್ಥದಲ್ಲಿ ದೇವರ ಸೇವೆ ಎಂದ ಅವರು, 2022ರ ವೇಳೆಗೆ ಭಾರತ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಕಾಣಿಸಿಕೊಳ್ಳಬೇಕು ಎಂಬ ತನ್ನ ಕನಸಿಗೆ ಈಗ ಇನ್ನಷ್ಟು ಉತ್ತೇಜನ ದೊರಕಿದೆ ಎಂದು ಹೇಳಿದರು.
ಕೇದಾರಪುರಿಯಲ್ಲಿ ಐದು ಪ್ರಮುಖ ನಿರ್ಮಾಣ ಕಾಮಗಾರಿಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಸುಧಾರಿತ ಸೌಕರ್ಯ ಒದಗಿಸುವುದು, ಮಂದಾಕಿನಿ ಮತ್ತು ಸರಸ್ವತಿ ನದಿಗಳ ಘಾಟ್ಗೆ ತಡೆಗೋಡೆ ನಿರ್ಮಾಣ, ದೇವಸ್ಥಾನ ತಲುಪಲು ಸುಧಾರಿತ ಸಂಪರ್ಕ ರಸ್ತೆ , 2013ರ ಜಲಪ್ರಳಯದಲ್ಲಿ ನಾಶವಾಗಿದ್ದ ಆದಿಗುರು ಶಂಕರಾಚಾರ್ಯರ ವೃಂದಾವನ(ಸಮಾಧಿ)ಸ್ಥಳದ ಪುನರ್ನಿರ್ಮಾಣ ಕಾಮಗಾರಿ ಇದರಲ್ಲಿ ಸೇರಿದೆ.
ಈ ಮಹಾತ್ವಾಕಾಂಕ್ಷಿ ಯೋಜನೆಗಳು ದುಬಾರಿ ವೆಚ್ಚದ್ದಾದರೂ ಇವನ್ನು ನಿಗದಿತ ಸಮಯ ಮಿತಿಯೊಳಗೆ ಮುಗಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಕೊರತೆಯಿಲ್ಲ ಎಂದು ಪ್ರಧಾನಿ ಹೇಳಿದರು. ಕೇದಾರನಾಥ ದೇವಸ್ಥಾನವನ್ನು ಶನಿವಾರ ಮುಚ್ಚಲಾಗುತ್ತಿದ್ದು ಆರು ತಿಂಗಳ ಬಳಿಕ ಮತ್ತೆ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಗುತ್ತದೆ.