ಖುರ್ಷಿದ್ ಅಹ್ಮದ್ ಬಡಗುಪೇಟೆ
ಉಡುಪಿ, ನ.12: ಉಡುಪಿಯ ಕೊಡುಗೈದಾನಿ ಹಾಜಿ ಅಬ್ದುಲ್ಲ ಸಾಹೇಬರ ಸಹೋದರ ಸಂಬಂಧಿ ಉಡುಪಿ ಬಡಗುಪೇಟೆಯ ಖುರ್ಷಿದ್ ಅಹ್ಮದ್ ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಕಲ್ಯಾಣಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಬಡಗುಪೇಟೆ ದಿ. ಉಸ್ಮಾನ್ ಸಾಹೇಬರ ಪುತ್ರ ಖುರ್ಷಿದ್ ಅಹ್ಮದ್ ಎಲ್ಐಸಿಯ ಮೆನೇಜರ್ ಆಗಿ ನಿವೃತ್ತರಾಗಿದ್ದು, ಉಡುಪಿ ಜಾಮೀಯ ಮಸೀದಿ ಮಾಜಿ ಅಧ್ಯಕ್ಷರಾಗಿ, ಕೊಡಂಕೂರು ಖುವ್ವತುಲ್ ಇಸ್ಲಾಂ ಮದ್ರಸದ ಗೌರವಾಧ್ಯಕ್ಷರಾಗಿ, ಉಡುಪಿ ಮುಸ್ಲಿಮ್ ವೆಲ್ಫೇರ್ನ ಅಜೀವ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಹಾಜಿ ಅಬ್ದುಲ್ಲಾ ಸಾಹೇಬರು ದಾನವಾಗಿ ನೀಡಿದ ಉಡುಪಿಯ ಸರಕಾರಿ ಆಸ್ಪತ್ರೆಯನ್ನು ಸರಕಾರ ಖಾಸಗೀಕರಣ ಮಾಡುವುದರ ವಿರುದ್ಧದ ಹೋರಾಟ ದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು, ಇದರ ವಿರುದ್ಧ ಕಾನೂನು ಸಮರಕ್ಕಾಗಿ ನ್ಯಾಯಾಲಯದ ಮೇಟ್ಟಿಲೇರಿದ್ದರು. ಇವರ ಕೆನಡಾದಲ್ಲಿರುವ ಓರ್ವ ಪುತ್ರಿ ಡಾ. ಝಹನರ ಅವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ಸೋಮವಾರ ಸಂಜೆ ಉಡುಪಿಯ ಖಬರ್ಸ್ತಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.